ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕೆಂಕೆರೆ ಗ್ರಾಮದ (Kenkere) ಕೆರೆ (Lake) ಕಟ್ಟೆ ಒಡೆದು ಅಪಾರ ಪ್ರಮಾಣದ ಕೆರೆಯ ನೀರು (Water), ರೈತರ ಜಮೀನುಗಳಿಗೆ ನುಗ್ಗುತ್ತಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
200 ಎಕರೆ ವಿಶಾಲವಾದ ಕೆರೆ 22 ವರ್ಷಗಳ ನಂತರ ಇದೇ ಮೊದಲ ಬಾರಿಗೆ 15 ದಿನಗಳಿಂದ ಮೈದುಂಬಿ ಕೋಡಿ ಹರಿದಿದೆ. ಆದರೆ ತಡರಾತ್ರಿ ಕೆರೆ ಕಟ್ಟೆಯ ಮಧ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಕೆರೆ ಏರಿ ಕಟ್ಟೆ ಸಂಪೂರ್ಣವಾಗಿ ಒಡೆದು ಹೋಗಿದೆ. ಕೆರೆಯಿಂದ ಅಪಾರ ಪ್ರಮಾಣದ ನೀರು ರಭಸವಾಗಿ ರೈತರ ಜಮೀನುಗಳಿಗೆ ನುಗ್ಗುತ್ತಿದೆ.
ಮೆಕ್ಕೆಜೋಳ, ರೇಷ್ಮೆ, ಟೊಮೊಟೊ, ಕನಕಾಂಬರ, ಸುಗಂಧ ಹೂವಿನ ತೋಟಗಳು ಸೇರಿದಂತೆ ನೂರಾರು ಎಕರೆ ರೈತರ ಜಮೀನುಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಕೆಂಕೆರೆ ಗ್ರಾಮದ 10-15 ಮನೆಗಳಿಗೂ ನೀರು ನುಗ್ಗಿದ್ದು, ನಿವಾಸಿಗಳು ಮನೆ ಖಾಲಿ ಮಾಡಿ ಎತ್ತರದ ಪ್ರದೇಶಗಳಿಗೆ ಹೋಗಿದ್ದಾರೆ. ಇದನ್ನೂ ಓದಿ: ಭಾರೀ ಮಳೆ- KRS ಡ್ಯಾಂನ ಒಳ, ಹೊರ ಹರಿವು ಹೆಚ್ಚಳ
ರಭಸವಾಗಿ ನೀರು ಹರಿಯುತ್ತಿರುವ ಕಾರಣ ಏರಿ ಮತ್ತಷ್ಟು ಒಡೆದು ಹೋಗುತ್ತಿದ್ದು ಮತ್ತಷ್ಟು ರಭಸವಾಗಿ ನೀರು ಮುನ್ನುಗ್ಗುವ ಸಾಧ್ಯತೆ ಇದೆ. ಇದರಿಂದ ಕೆಂಕೆರೆ ಗ್ರಾಮದ ಪಕ್ಕದ ಕೆಟಿ ಹಳ್ಳಿಗೆ ನೀರು ನುಗ್ಗುವ ಆತಂಕವಿದ್ದು, ಕೆಟಿ ಹಳ್ಳಿ ಗ್ರಾಮಸ್ಥರು ಎತ್ತರದ ಪ್ರದೇಶಗಳಿಗೆ ಹೋಗುವಂತೆ ತಿಳಿಸಲಾಗಿದೆ.
22 ವರ್ಷಗಳ ನಂತರ ಮೈದುಂಬಿದ ಕೆರೆ ಕಂಡು ಗ್ರಾಮಸ್ಥರಲ್ಲಿ ಸಂತಸ ಮೂಡಿತ್ತು. ಆದರೆ ಈಗ ಕೆರೆ ಕಟ್ಟೆ ಒಡೆದಿರುವ ಕಾರಣ ಗ್ರಾಮಸ್ಥರಿಗೆ ಎಲ್ಲಿಲ್ಲದ ಆತಂಕ ಶುರುವಾಗಿದೆ. ಕೆರೆ ಬಳಿ ನೂರಾರು ಜನ ಜಮಾಯಿಸಿದ್ದು, ಗೌರಿಬಿದನೂರು ಗ್ರಾಮಾಂತರ ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಕೆರೆ ಏರಿಯತ್ತ ಯಾರು ಕೂಡ ಹೋಗದಂತೆ ತಡೆಯೊಡ್ಡಿದ್ದಾರೆ. ಇದನ್ನೂ ಓದಿ: ಮುಸ್ಲಿಮರಲ್ಲೂ ಜಾತಿ ಪದ್ಧತಿ – ಪಿಂಜಾರ, ನದಾಫ್ ಉಪಜಾತಿಗೆ ವಿಶೇಷ ಮೀಸಲಾತಿ ಕೊಡಲು ಒತ್ತಾಯ