ಲಕ್ನೋ: ಉತ್ತರ ಪ್ರದೇಶದ (Uttar Pradesh) ಔರೈಯಾ ಜಿಲ್ಲೆಯಲ್ಲಿ ಶಾಲೆಯ ಶಿಕ್ಷಕನಿಂದ (Teacher) ಥಳಿಸಲ್ಪಟ್ಟಿದ್ದ 15 ವರ್ಷದ ದಲಿತ ಬಾಲಕ (Dalit Boy) ಸಾವನ್ನಪ್ಪಿದ್ದು, ಇದೀಗ ಭಾರೀ ಪ್ರತಿಭಟನೆಗೆ (Protest) ಕಾರಣವಾಗಿದೆ.
ಸೆಪ್ಟೆಂಬರ್ 7 ರಂದು ಬಾಲಕ ನಿಖಿತ್ ದೋಹ್ರೆ ಶಾಲೆಯಲ್ಲಿ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕಾಗಿ ಶಿಕ್ಷಕ ಅಶ್ವಿನಿ ಸಿಂಗ್ ಆತನಿಗೆ ಥಳಿಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಶನಿವಾರ ಆತನನ್ನು ನೆರೆಯ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆತ ಸಾವನ್ನಪ್ಪಿದ್ದಾನೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಆತನ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಇದೀಗ ತಲೆಮರೆಸಿಕೊಂಡಿರುವ ಶಿಕ್ಷಕನನ್ನು ತಕ್ಷಣವೇ ಬಂಧಿಸಬೇಕೆಂದು ಬಾಲಕನ ಕುಟುಂಬ ಹಾಗೂ ಭೀಮ್ ಆರ್ಮಿ ಸಂಘಟನೆಯ ಸದಸ್ಯರು ಒತ್ತಾಯಿಸಿದ್ದಾರೆ. ಆರಂಭದಲ್ಲಿ ಬಾಲಕನ ಅಂತ್ಯಸಂಸ್ಕಾರ ಮಾಡಲು ಕುಟುಂಬ ನಿರಾಕರಿಸಿ, ಆತ ಓದಿದ್ದ ಶಾಲೆಯ ಬಳಿಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಈದ್ಗಾದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಸಂಘಟನೆಗಳ ಪಟ್ಟು
ಇದೀಗ ಪ್ರತಿಭಟನೆ ಹಿಂಸಾಚಾರಕ್ಕೆ (Violence) ತಿರುಗಿದ್ದು, ಕೆಲ ಸ್ಥಳೀಯರು ಪೊಲೀಸ್ ಜೀಪ್ಗೆ ಬೆಂಕಿ ಹಚ್ಚಿದ್ದಾರೆ. ಮಾತ್ರವಲ್ಲದೇ ಪೊಲೀಸರ ಮೇಲೂ ಕಲ್ಲುತೂರಾಟ ನಡೆಸಿದ್ದಾರೆ.
ಘಟನೆಯ ಬಗ್ಗೆ ತಿಳಿದು ಹಿರಿಯ ಪೊಲೀಸ್ ಮತ್ತು ಜಿಲ್ಲಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತ್ವರಿತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಬಳಿಕ ಬಾಲಕನ ಕುಟುಂಬ ಮತ್ತು ಭೀಮ್ ಆರ್ಮಿ ಸದಸ್ಯರು ಶವಸಂಸ್ಕಾರಕ್ಕಾಗಿ ನಿಖಿತ್ನ ಮೃತದೇಹವನ್ನು ಅವರ ಗ್ರಾಮಕ್ಕೆ ಕೊಂಡೊಯ್ದಿದ್ದಾರೆ.
ಇದೀಗ ತಲೆಮರೆಸಿಕೊಂಡಿರುವ ಶಿಕ್ಷಕನ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದು, ಶೀಘ್ರವೇ ಆಕೆಯನ್ನು ಬಂಧಿಸಲಾಗಿವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನಕ್ಕೆ ಬಡಿದ ಪಕ್ಷಿ – ಕಣ್ಣೂರಿನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್