– ಓರ್ವನ ಕೊಲೆ, ಮತ್ತೊಬ್ಬನಿಗೆ ಗಾಯ
ಮಂಗಳೂರು: ಗೆಳೆಯರು ಪರಸ್ಪರ ಹೊಡೆದಾಡಿಕೊಂಡು ಓರ್ವನನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ನಲ್ಲಿ ನಡೆದಿದೆ.
ಗುಡ್ಡೆಕೊಪ್ಲ ನಿವಾಸಿ ಸಂದೇಶ್ ಕರ್ಕೇರ (35) ಕೊಲೆಯಾದ ಯುವಕ. ಘಟನೆಯಲ್ಲಿ ಗಣೇಶ್ ಎಂಬಾತನಿಗೆ ಗಾಯವಾಗಿದ್ದು, ಆತನನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶುಕ್ರವಾರ ರಾತ್ರಿ ಸುರತ್ಕಲ್ ಖಾಸಗಿ ಬಾರ್ ಒಂದರಲ್ಲಿ ಘಟನೆ ನಡೆದಿದೆ.
ಸಂದೇಶ್, ಗಣೇಶ್ ಹಾಗೂ ಕೆಲ ಸ್ನೇಹಿತರು ಶುಕ್ರವಾರ ರಾತ್ರಿ 11 ಗಂಟೆಗೆ ಬಾರ್ಗೆ ಹೋಗಿದ್ದರು. ಮದ್ಯದ ಅಮಲಿನಲ್ಲಿದ್ದಾಗ ಯಾವುದೋ ವಿಚಾರವಾಗಿ ಮಾತಿಗೆ ಮಾತು ಬೆಳೆದು, ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಗೆಳೆಯನೊಬ್ಬ ಮಾರಕಾಸ್ತ್ರದಿಂದ ಸಂದೇಶ್ ಎದೆಗೆ ಇರಿದಿದ್ದಾನೆ. ಪರಿಣಾಮ ಆತ ಅತಿಯಾದ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜೊತೆಗೆ ಘಟನೆಯಲ್ಲಿ ಗಣೇಶ್ ಗಾಯಗೊಂಡಿದ್ದಾನೆ.
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಬಳಿಕ ಸಂದೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.