– ಎರಡು ಆನೆ ದಂತ ವಶಕ್ಕೆ ಪಡೆದ ಅಧಿಕಾರಿಗಳು
ಮಂಗಳೂರು: ಆನೆ ದಂತ ಕಳವು ಮಾಡಿ ಮಾರುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಪುತ್ತೂರು ಅರಣ್ಯ ಸಂಚಾರ ದಳವು ಇಬ್ಬರನ್ನು ಬಂಧಿಸಿದೆ.
ಮಡಿಕೇರಿ ನಿವಾಸಿ ದಿನೇಶ್ ಹಾಗೂ ಸಕಲೇಶಪುರದ ನಿವಾಸಿ ಕುಮಾರ್ ಬಂಧಿತ ಆರೋಪಿಗಳು. ಪುತ್ತೂರು ಅರಣ್ಯ ಸಂಚಾರ ದಳದ ಅಧಿಕಾರಿಗಳು ಇಂದು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಬಂಧಿತರಿಂದ ಸುಮಾರು 30 ಲಕ್ಷ ರೂ. ಮೌಲ್ಯದ ಎರಡು ಆನೆಯ ದಂತಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಓಮ್ನಿ ಕಾರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಪುದುಬೆಟ್ಟು ಪ್ರದೇಶದಲ್ಲಿ ಸಕಲೇಶಪುರದಿಂದ ಧರ್ಮಸ್ಥಳ ಮಾರ್ಗವಾಗಿ ಸಾಗುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು, ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಕಾರಿನಲ್ಲಿ 30 ಲಕ್ಷ ರೂ. ಬೆಲೆಬಾಳುವ ಎರಡು ಆನೆ ದಂತ ಪತ್ತೆಯಾಗಿವೆ.
ಬಂಧಿತ ದಿನೇಶ್ ಹಾಗೂ ಕುಮಾರ್ ಆನೆ ದಂತ ಹಾಗೂ ಅವುಗಳನ್ನು ಸಾಗಿಸಲು ಬಳಸಿದ ಮಾರುತಿ ಓಮ್ನಿ ಕಾರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು, ಆನೆಗಳನ್ನು ಕೊಂದು ಅದರ ದಂತವನ್ನು ಕದ್ದು ಮಾರುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದಾರೆ. ಈ ಹಿಂದೆಯೂ ಇದೇ ರೀತಿ ಆನೆ ದಂತಗಳನ್ನು ಮಾರಾಟ ಮಾಡಿರುವ ಶಂಕೆಯಿಂದ ಅಧಿಕಾರಿಗಳು ಮತ್ತಷ್ಟು ವಿಚಾರಣೆ ನಡೆಸಿದ್ದಾರೆ.