ಚೆನ್ನೈ: ದಿನಗೂಲಿ ಕಾರ್ಮಿಕನೊಬ್ಬ ಆಗ ತಾನೇ ಹುಟ್ಟಿದ ಅವಳಿ ಮಕ್ಕಳಲ್ಲಿ ಹೆಣ್ಣು ಮಗುವನ್ನು ಮಾರಿ ಮೊಬೈಲ್ ಹಾಗೂ ಚಿನ್ನದ ಸರ ಖರೀದಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿ ತಂದೆ ಯೇಸುರುಧಯರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಮಗುವನ್ನು ಮಕ್ಕಳಿಲ್ಲದವರಿಗೆ ಹಣಕ್ಕಾಗಿ ನೀಡುವ ಮೂಲಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಏನಿದು ಘಟನೆ?
ನವೆಂಬರ್ 8ರಂದು ಯೇಸುರುಧಯರಾಜ್ ಪತ್ನಿ ಪುಷ್ಪಲತಾ ಗಂಡು ಹಾಗೂ ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಈ ದಂಪತಿಗೆ ಈಗಾಗಲೇ ಒಬ್ಬಳು ಮಗಳಿದ್ದಾಳೆ. ಹೀಗಾಗಿ ಇನ್ನೊಂದು ಹೆಣ್ಣು ಮಗು ಬೇಡ ಎಂದು ನಿರ್ಧರಿಸಿ ಗಂಡು ಮಗುವನ್ನು ಇಟ್ಟುಕೊಂಡು ಹೆಣ್ಣು ಮಗುವನ್ನು ಮಾರಾಟ ಮಾಡಲು ಆರೋಪಿ ತಂದೆ ತೀರ್ಮಾನಿಸಿದ್ದಾನೆ. ಅಲ್ಲದೆ ದಲ್ಲಾಳಿಗಳ ಮುಖಾಂತರ ತಿರುನೆಲ್ವೇಲಿಯಲ್ಲಿ ಮಕ್ಕಳಿಲ್ಲದವರು ಇದ್ದರೆ ತಿಳಿಸಿ. ಹೆಣ್ಣು ಮಗುವನ್ನು ಮಾರಾಟ ಮಾಡುವುದಾಗಿ ಹೇಳಿದ್ದಾನೆ.
ಹೀಗೆ 1 ಲಕ್ಷದ 80 ಸಾವಿರಕ್ಕೆ ಮಗು ಮಾರಾಟ ಕೂಡ ಆಗುತ್ತದೆ. ಅದರಲ್ಲಿ 80 ಸಾವಿರವನ್ನು ಮೂವರು ಬ್ರೋಕರ್ ಗಳು ಹಂಚಿಕೊಂಡು ಉಳಿದ ಹಣವನ್ನು ಆರೋಪಿ ತಂದೆಯ ಕೈಗಿತ್ತಿದ್ದಾರೆ.
ವರದಿಗಳ ಪ್ರಕಾರ, ಆರೋಪಿ ಮಗು ಮಾರಾಟ ಮಾಡುವ ವಿಚಾರವನ್ನು ತನ್ನ ಪತ್ನಿಯ ಬಳಿ ತಿಳಿಸಿರಲಿಲ್ಲ. ಹೀಗಾಗಿ ತನ್ನ ಕೈಗೆ ಹಣ ಸಿಕ್ಕಿದ ಕೂಡಲೇ ಆತ ಮದ್ಯ ಹಾಗೂ ಮೊಬೈಲ್ ಖರೀದಿಸಿದ್ದಾನೆ. ನಂತರ ಗಂಡು ಮಗುವಿಗೆ ಚಿನ್ನವನ್ನು ಖರೀದಿ ಮಾಡಿದ್ದಾನೆ. ಜೊತೆಗೆ ತಾನು ಅಡ ಇಟ್ಟಿದ್ದ ಬೈಕ್ ಹಾಗೂ ಸೈಕಲ್ ನನ್ನು ಬಿಡಿಸಿಕೊಂಡಿದ್ದಾನೆ.
ಇತ್ತ ತನ್ನ ಮಗನನ್ನು ಮಾರಿರುವ ಗಂಡನ ಮೋಸದ ವಿಚಾರ ಪತ್ನಿ ಪುಷ್ಪಲತಾ ಗಮನಕ್ಕೆ ಬಂದಿದ್ದು, ಕ್ಯಾತೆ ತೆಗೆದಿದ್ದಾಳೆ. ಪತಿ ಹಾಗೂ ಪತ್ನಿಯ ಜಗಳ ತಾರಕಕ್ಕೇರುತ್ತಿದ್ದಂತೆಯೇ ಆಸ್ಪತ್ರೆಯ ನರ್ಸ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೂವರು ಬ್ರೋಕರ್ ಗಳು ಹಾಗೂ ಆರೋಪಿ ಯೇಸುರುಧಯರಾಜ್ ವಿರುದ್ಧ ಐಪಿಸಿ ಸೆಕ್ಷನ್ 363(ಅಪಹರಣ), 120ಬಿ(ಕ್ರಮಿನಲ್ ಪಿತೂರಿ), 420(ವಂಚನೆ) ಹಾಗೂ 147(ಗಲಭೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.