ಮಂಡ್ಯ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಜಾರಿ ನಿರ್ದೇಶನಾಲಯದ (Enforcement Directorate) ಎದುರು ವಿಚಾರಣೆಗೆ ಹಾಜರಾಗುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಹೀಗಾಗಿ ಇಂದೇ ದೆಹಲಿಗೆ ಡಿಕೆ ಸಹೋದರರಾದ ಡಿ.ಕೆ.ಶಿವಕುಮಾರ್ (D.K.Shivakumar) ಹಾಗೂ ಸಂಸದ ಡಿ.ಕೆ.ಸುರೇಶ್ (D.K.Suresh) ತೆರಳಲಿದ್ದಾರೆ.
ಮಂಡ್ಯದಲ್ಲಿ ಭಾರತ್ ಜೋಡೋ ಪಾದಯಾತ್ರೆಯಲ್ಲಿ (Bharat Jodo Yatra) ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದರು. ನಂತರ ಖರಡ್ಯ ಗ್ರಾಮದಲ್ಲಿ ಈ ಕುರಿತು ಮಾತನಾಡಿದ ಅವರು, ವಿಚಾರಣೆಗೆ ಹಾಜರಾಗಲು ನಾನು ಮತ್ತು ಡಿ.ಕೆ.ಸುರೇಶ್ ಸಮಯಾವಕಾಶ ಕೇಳಿದ್ದೆವು. ಭಾರತ್ ಜೋಡೋ ಯಾತ್ರೆ ಮುಗಿದ ಮೇಲೆ ಬರುತ್ತೇವೆ ಎಂದು ಕಾಲಾವಕಾಶ ಕೊಡಿ ಅಂತಾ ಕೇಳಿದ್ದೆವು. ಇವತ್ತು ಇಡಿಯವರು ಮತ್ತೊಂದು ನೋಟಿಸ್ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆ ಬ್ರದರ್ಸ್ಗೆ ಸಂಕಷ್ಟ – ನಾಳೆ ವಿಚಾರಣೆಗೆ ಹಾಜರಾಗಿ ಎಂದ ED
ನಾವು ನಿಮಗೆ ಆದೇಶ ಕೊಡುತ್ತಿದ್ದೇವೆ. ಹೀಗಾಗಿ ನಾಳೆ 10:30ಕ್ಕೆ ಇಡಿ ವಿಚಾರಣೆಗೆ ಹಾಜರಾಗುವಂತೆ 2ನೇ ನೋಟಿಸ್ ಕೊಟ್ಟಿದ್ದಾರೆ. ಈ ಬಗ್ಗೆ ಪಕ್ಷದ ಹಿರಿಯರ ಜೊತೆ ಚರ್ಚಿಸಿದ್ದೇವೆ. ನಾವು ನಮ್ಮ ಪಕ್ಷ ಕಾನೂನಿಗೆ ಗೌರವ ಕೊಡುವವರು. ಕಾನೂನಿಗೆ ಅಗೌರವ ತೋರುವುದು ಸರಿಯಲ್ಲ. ಹೀಗಾಗಿ ನೋಟಿಸ್ಗೆ ಗೌರವ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.
ಡಿ.ಕೆ.ಸುರೇಶ್ ಹಾಗೂ ನಾನು ಇಬ್ಬರೂ ದೆಹಲಿಗೆ ಹೋಗುತ್ತೇವೆ. ನಾಳೆ ಅವರು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಅಮ್ಮನ ಶೂ ಲೇಸ್ ಕಟ್ಟಿದ ರಾಹುಲ್