ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಸಚಿವ ಡಿ.ಕೆ ಶಿವಕುಮಾರ್ ಅವರು ಇಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ದಿವಂಗತ ಸಚಿವ ಸಿ.ಎಸ್ ಶಿವಳ್ಳಿ ಅವರನ್ನು ನೆನೆದು ವೇದಿಕೆ ಮೇಲೆಯೇ ಕಣ್ಣೀರಿಟ್ಟಿದ್ದಾರೆ.
ಇಂಗಳಗಿ ಗ್ರಾಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ವೇದಿಕೆ ಮೇಲೆ ಮಾತನಾಡುತ್ತಿದ್ದ ಅವರು ಶಿವಳ್ಳಿ ಅವರನ್ನು ಕಳೆದುಕೊಂಡಿರುವುದು ಮನಸ್ಸಿಗೆ ಬಹಳ ನೋವನ್ನು ತಂದಿದೆ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.
ಶಿವಳ್ಳಿ ಜಾತಿ ಧರ್ಮ ಬೇಧ ಭಾವ ಮಾಡಲಿಲ್ಲ. ನಿಮಗೆ ಯಾವತ್ತಾದ್ರೂ ಅವನು ಕಿರುಕುಳ ನೀಡಿದ್ದಾನಾ ಹೇಳಿ? ಪಾಪ ಶಿವಳ್ಳಿ ಪತ್ನಿ ಕುಸುಮಾ ಅವರು ಇಂದು ಚುನಾವಣೆಗೆ ನಿಂತಿದ್ದಾರೆ. ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಅವರನ್ನು ಗೆಲ್ಲಿಸಿ ಮೈತ್ರಿ ಸರ್ಕಾರವನ್ನು ಬಲಗೊಳಿಸಿ ಎಂದು ಹೇಳಿ ಭಾವುಕರಾದರು.
ಈಗ ಚುನಾವಣೆ ಬಂದಿದೆ ವೋಟ್ ಕೊಡಿ ಎಂದು ಕಣ್ಣಿರು ಹಾಕುತ್ತಿಲ್ಲ. ಬದಲಿಗೆ ನನಗೆ ತುಂಬಾ ಹತ್ತಿರವಾದ ಗೆಳೆಯ ಅವನು. ಶಿವಳ್ಳಿಯನ್ನು ಕಳೆದುಕೊಂಡು ನನಗೆ ನೋವಾಗಿದೆ. ಹೀಗಾಗಿ ನನಗೆ ಅಳು ಬಂದಿದೆ. ನಾನು ನಾಟಕ ಮಾಡುತ್ತಿಲ್ಲ ಎಂದು ಹೇಳಿ ಭಾವುಕರಾದರು.