ಬೆಂಗಳೂರು: ಸಿಲಿಂಡರ್ ಸ್ಫೋಟದಿಂದ (cylinder blast) 13 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಬೆಂಗಳೂರಿನ ಹೆಬ್ಬಾಳ ಸಮೀಪದ ಗುಡ್ಡದಹಳ್ಳಿಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ರಾಮಸಮುದ್ರ ಮೂಲದ ಸರವ್ವ – ಮಲ್ಲಪ್ಪ ಎಂಬುವವರ ಪುತ್ರ ಮಹೇಶ್ (13) ಮೃತಪಟ್ಟ ಬಾಲಕ. ಮಹೇಶ್ ಆತನ ತಂದೆ, ತಾಯಿಯೊಂದಿಗೆ ಹೆಬ್ಬಾಳದ ಗುಡ್ಡದಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅಷ್ಟೇ ಅಲ್ಲದೇ ಆತನ ಪೋಷಕರು ಜೀವನೋಪಾಯಕ್ಕಾಗಿ ಗಾರೆ ಕೆಲಸ, ಮನೆಗೆಲಸಗಳನ್ನು ಮಾಡುತ್ತಿದ್ದಾರೆ.
ಭಾನುವಾರದ ಹಿನ್ನೆಲೆಯಲ್ಲಿ ಮಹೇಶ್ ಮನೆಯ ಪಕ್ಕದಲ್ಲೇ ಇರುವ ಗ್ಯಾಸ್ ರೀ ಫಿಲ್ಲಿಂಗ್ ಬಳಿ ಬಂದಿದ್ದ. ಅದೇ ವೇಳೆ, ರೀ ಫಿಲ್ಲಿಂಗ್ ಮಾಡ್ತಿದ್ದ ಸಿಲಿಂಡರ್ ಬ್ಲಾಸ್ಟ್ ಆಗಿತ್ತು. ಸ್ಫೋಟದ ತೀವ್ರತೆಗೆ ಅಂಗಡಿಯ ಪಕ್ಕದಲ್ಲಿದ್ದ ಮಹೇಶ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಇದನ್ನೂ ಓದಿ: ಹಿಂದೂ, ಮುಸ್ಲಿಮರ ಮಧ್ಯೆ ಜಗಳ ಹಚ್ಚುವ ಈ ಸರ್ಕಾರಗಳನ್ನ ಕಿತ್ತೊಗೆಯಬೇಕು – ಖರ್ಗೆ ಕರೆ
ಘಟನೆ ವೇಳೆ ತಕ್ಷಣ ಮಹೇಶ್ನನ್ನು ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲು ಮಾಡಲು ಕರೆದೊಯ್ಯಲಾಗುತ್ತಿತ್ತು. ಆದರೆ ಮಹೇಶ್ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಗ್ಯಾಸ್ ರೀ ಫಿಲ್ಲಿಂಗ್ ಮಾಡೋಕೆ ಜಾಗ ಬಾಡಿಗೆ ಕೊಟ್ಟಿದ್ದ ದೇವರಾಜ್, ರೀ ಫಿಲ್ಲಿಂಗ್ ಮಾಡುತ್ತಿದ್ದ ಲಿಕಾಯತ್ ಎನ್ನುವವರು ಘಟನಾ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಲಕ್ಷಾಂತರ ಮೌಲ್ಯದ ಬ್ರಾಂಡೆಡ್ ಮದ್ಯ ವಶ – ಆರೋಪಿ ಬಂಧನ