ಬೆಂಗಳೂರು: ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ (Basavaraj Horatti) ಪೊಲೀಸರಿಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸಿಟಿ ರವಿ (CT Ravi) ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಸಂವಿಧಾನಿಕ ಸಂಘರ್ಷ ಕೋರ್ಟ್ ಅಂಗಳಕ್ಕೆ ಹೋಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಹೌದು. ಸಭಾಪತಿ ಬಸವರಾಜ ಹೊರಟ್ಟಿ ಅವರು ಸದನದ ಒಳಗೆ ನಡೆಯುವ ವಿಚಾರಗಳಿಗೆ ಪೊಲೀಸರು (Police) ಹಸ್ತಕ್ಷೇಪ ಮಾಡುವಂತಿಲ್ಲ. ಮಹಜರು ನಡೆಸಲು ನಾನು ಅನುಮತಿ ನೀಡಿಲ್ಲ. ಯಾವುದೇ ಕಾರಣಕ್ಕೂ ಸದನದ ಒಳಗೆ ಬರಬಾರದು ಎಂದು ಎಚ್ಚರಿಕೆ ನೀಡಿದ್ದೇನೆ. ನನ್ನ ಆದೇಶವನ್ನು ಧಿಕ್ಕರಿಸಿದರೆ ಪೊಲೀಸರೇ ಜೈಲಿಗೆ ಹೋಗ್ಬೇಕಾಗುತ್ತೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಿ.ಟಿ.ರವಿ, ಹೆಬ್ಬಾಳ್ಕರ್ ಕೇಸ್ ಮುಗಿದ ಅಧ್ಯಾಯವಾಗಿದ್ದು 19 ರಂದೇ ಸದನದಲ್ಲಿ ರೂಲಿಂಗ್ ಕೊಟ್ಟಿದ್ದೇನೆ. ಅನಿರ್ದಿಷ್ಟಾವಧಿಗೆ ಸದನ ಮುಂದೂಡಿಕೆ ಆಗಿದೆ. ಸದನದ ಒಳಗೆ ನಡೆಯುವ ಘಟನೆಗಳಿಗೆ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ. ನಮ್ಮ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿಲ್ಲ. ಅದೆಲ್ಲ ಫೇಕ್ ವಿಡಿಯೋ ಇರಬೇಕು. ದಾಖಲೆ ಇದ್ದರೆ ದೂರು ಕೊಡಲಿ ಎಫ್ಎಸ್ಎಲ್ಗೆ ಕೊಡುತ್ತೇವೆ ಎಂದು ಹೇಳಿದ್ದಾರೆ.
ಹೊರಟ್ಟಿ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೆ ಹೀರೆಬಾಗೇವಾಡಿ ಠಾಣೆಯಲ್ಲಿ ದಾಖಲಾದ ಎಫ್ಐಆರ್ (FIR) ತನಿಖೆ ಹೇಗೆ ಎಂಬ ಗಂಭೀರ ಪ್ರಶ್ನೆ ಎದ್ದಿದೆ. ಅಧಿವೇಶನ ನಡೆಯುತ್ತಿರುವಾವಾಗಲೇ ಜನಪ್ರತಿನಿಧಿ ಬಂಧಿಸುವುದು ಅಷ್ಟು ಸುಲಭವಲ್ಲ. ಕರ್ನಾಟಕ ವಿಧಾನಸಭೆ ಕಾರ್ಯವಿಧಾನ ಮತ್ತು ಕಲಾಪ ನಿಯಮಾವಳಿಯ ಅನ್ವಯ ಸಭಾಧ್ಯಕ್ಷರ ಅನುಮತಿ ಇಲ್ಲದೇ ಬಂಧನ ಮಾಡುವಂತಿಲ್ಲ. ಆದರೆ ಈ ಪ್ರಕರಣದಲ್ಲಿ ಸ್ಪೀಕರ್ ಅವರ ಅನುಮತಿ ಪಡೆಯದೇ ಬಂಧಿಸಲಾಗಿದೆ. ಇದನ್ನೂ ಓದಿ: ಸಿಟಿ ರವಿ ಕೇಸ್ – ಪ್ರತಿಷ್ಠೆಗೆ ಬಿದ್ದು ಏನೋ ಮಾಡಲು ಹೋಗಿ ಯಡವಟ್ಟು ಮಾಡಿತಾ ಸರ್ಕಾರ?
ನಮ್ಮ ಕ್ಯಾಮೆರಾದಲ್ಲಿ ಸೆರೆಯಾದ ಆಡಿಯೋದಲ್ಲಿ ಸಿಟಿ ರವಿ ಅಸಂವಿಧಾನಿಕ ಪದ ಬಳಸಿದ್ದು ಕೇಳಿಲ್ಲ ಎಂದು ಹೊರಟ್ಟಿ ತಿಳಿಸಿದ್ದಾರೆ. ಹೀಗಾಗಿ ಪೊಲೀಸರು ಯಾವ ವಿಡಿಯೋ, ಆಡಿಯೋವನ್ನು ಪರಿಗಣಿಸಿ ಎಫ್ಐಆರ್ ದಾಖಲಿಸಿದ್ದಾರೆ ಎಂಬ ಪ್ರಶ್ನೆ ಎದ್ದಿದೆ. ಏನೋ ಮಾಡಲು ಹೋಗಿ ಏನೋ ಮಾಡಿ ಪೊಲೀಸರು ಈಗ ಇಕ್ಕಟ್ಟಿನಲ್ಲಿ ಸಿಲುಕಿದಂತೆ ಕಾಣುತ್ತಿದೆ.
ಸರ್ಕಾರ ಪೊಲೀಸ್ ತನಿಖೆಗೆ ಆಸಕ್ತಿ ತೋರಿಸಿದೆ. ಸ್ಪೀಕರ್ ಸದನದ ಒಳಗಡೆ ನಡೆದ ವಿಚಾರಕ್ಕೆ ಪೊಲೀಸ್ ತನಿಖೆ ಸಾಧ್ಯವಿಲ್ಲ ಎಂದಿದ್ದಾರೆ. ಹೀಗಾಗಿ ಈ ಪ್ರಕರಣ ಹೇಗೆ ಮುಂದೆ ಸಾಗುತ್ತದೆ ಎನ್ನುವುದೇ ದೊಡ್ಡ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಸದನದೊಳಗೆ ನಡೆಯುವ ಘಟನೆಗಳಿಗೆ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ: ಬಸವರಾಜ ಹೊರಟ್ಟಿ