-ಸಿಎಂ ಬ್ಯಾಟ್ಸ್ಮನ್, ಡಿಸಿಎಂ ಬೌಲರ್, ಪರಂ ವಿಕೆಟ್ ಕೀಪರ್ ಎಂದು ವಾಗ್ದಾಳಿ
ಬೆಂಗಳೂರು: ಕಾಂಗ್ರೆಸ್ಸಿನವರೇ (Congress) ಸಿಕ್ಸ್, ಫೋರ್ ಹೊಡೆದು ಆರ್ಸಿಬಿಯನ್ನು ಗೆಲ್ಲಿಸಿದಂತೆ ವಿಜಯೋತ್ಸವದ ವೇಳೆ ಅವರಿಗೆ ಆತುರ ಇತ್ತು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (CT Ravi) ಕಿಡಿಕಾರಿದ್ದಾರೆ.
ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರೇ ಸಿಕ್ಸ್, ಫೋರ್ ಹೊಡೆದು ಗೆಲ್ಲಿಸಿದಂತೆ ಅವರ ಆತುರ ಇತ್ತು. ಡಿಕೆಶಿ ಬೌಲರ್, ಸಿದ್ದರಾಮಯ್ಯನವರೇ ಬ್ಯಾಟ್ಸ್ಮನ್, ಪರಮೇಶ್ವರ್ ವಿಕೆಟ್ ಕೀಪರ್ ಎಂಬಂತೆ ನಿಮ್ಮ ವರ್ತನೆ ಇತ್ತು. ಆರ್ಸಿಬಿ ತಂಡದ ಗೆಲುವಿಗೆ ನೀವೇ ಪಾತ್ರಧಾರಿಗಳೆಂಬಂತೆ ನಿಮ್ಮ ವ್ಯವಹಾರ ಇತ್ತು. ನಿಮ್ಮ ಆತುರ, ಕ್ರೆಡಿಟ್ ವಾರ್ನಿಂದ 11 ಅಮಾಯಕರು ಬಲಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಹುಲಿ ದಾಳಿಗೆ ಮಹಿಳೆ ಸಾವು: ಈಶ್ವರ ಖಂಡ್ರೆ ಸಂತಾಪ
ಆಗ ಆತುರ ಮಾಡಿ, ಈಗ ಕೋರ್ಟಿಗೆ 2 ತಿಂಗಳು ಬೇಕೆಂದು ಕೇಳುತ್ತಿರುವುದೇಕೆ? ಮಾಹಿತಿಯನ್ನು ರಿ-ರೈಟ್ ಮಾಡಬೇಕೇ? ಯಾವ ಕಾರಣಕ್ಕೆ 2 ತಿಂಗಳು ಕೇಳುತ್ತೀರಿ? 2 ದಿನದಲ್ಲಿ ಕೊಡಿ ಎಂದು ನ್ಯಾಯಾಲಯ ಸರಿಯಾಗಿ ಹೇಳಿದೆ. ಎಲ್ಲವೂ ಸಿದ್ಧವಿರುವಾಗ 2 ದಿನವೂ ಬೇಕಿರಲಿಲ್ಲ. ಈಗ ಕೋರ್ಟಿಗೆ ಉತ್ತರ ನೀಡಲು 2 ತಿಂಗಳು ಕೇಳಿದ್ದು, ಜನಮಾನಸದಿಂದ ಮರೆಯಾಗಲಿ ಎಂಬ ಕಾರಣಕ್ಕೆ ಹೀಗೆ ಕೇಳಿದ್ದಾರಾ? ಇಷ್ಟೇ ತಾಳ್ಮೆಯನ್ನು ಬಳಸಿ 2 ದಿನ ತೆಗೆದುಕೊಂಡಿದ್ದರೆ, ಕಾರ್ಯಕ್ರಮವೂ ಚೆನ್ನಾಗಿ ಆಗುತ್ತಿತ್ತು. ರಾಜ್ಯದ ಮರ್ಯಾದೆಯೂ ಉಳಿಯುತ್ತಿತ್ತು. 11 ಜನರ ಜೀವವೂ ಉಳಿಯುತ್ತಿತ್ತು ಎಂದರು.
ಆರ್ಸಿಬಿ ಫ್ರ್ಯಾಂಚೈಸಿ ಗೆದ್ದ ಕೆಲವೇ ಗಂಟೆಗಳಲ್ಲಿ ಮೈಮೇಲೆ ಬಿದ್ದು ನಾನು ಮುಂದೆ, ನಾನು ಮುಂದೆ ಎಂದು ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿದ್ದಾರೆ. ಕಾರ್ಯಕ್ರಮ ಆಯೋಜಿಸಲು ಒಂದು ದಿನವೂ ಸಮಯ ತೆಗೆದುಕೊಂಡಿಲ್ಲ. ಜೂ.3ರಂದು ಕ್ರಿಕೆಟ್ ಮ್ಯಾಚ್ ಇತ್ತು. ಜೂ.4ರಂದು ವಿಜಯೋತ್ಸವ ಮಾಡಿದ್ದಾರೆ. ಆಗ ನೀವು 2 ಗಂಟೆ ಶಾಂತವಾಗಿ ಯೋಚಿಸಿದ್ದರೆ 11 ಅಮಾಯಕ ಯುವ ಪ್ರತಿಭೆಗಳ ಪ್ರಾಣ ಉಳಿಯುತ್ತಿತ್ತಲ್ಲವೇ ಎಂದು ಕೇಳಿದರು.
ಈಗ ಅಘೋಷಿತ ತುರ್ತು ಪರಿಸ್ಥಿತಿ:
ಇಂದಿರಾ ಗಾಂಧಿಯವರ ಕಾಲದಲ್ಲಿ ಕಾಂಗ್ರೆಸ್ ಆಡಳಿತ ಹೇರಿದ್ದ ತುರ್ತು ಪರಿಸ್ಥಿತಿಗೆ 50 ವರ್ಷವಾಗಿದೆ. ಆಗ ಪ್ರತಿಭಟಿಸುವ ಹಕ್ಕು ಇರಲಿಲ್ಲ. ಜೂನ್ 25ಕ್ಕೆ ತುರ್ತು ಪರಿಸ್ಥಿತಿಗೆ 50 ವರ್ಷವಾಗಲಿದೆ. ತುರ್ತು ಪರಿಸ್ಥಿತಿ ಗುಂಗಿನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಇದ್ದಂತಿದೆ. ಆಗ ಘೋಷಿತ ತುರ್ತು ಪರಿಸ್ಥಿತಿ ಇತ್ತು. ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಚಳವಳಿ ಮಾಡುತ್ತಾರೆಂಬ ಬೆದರಿಕೆಗೆ ಕಾಂಗ್ರೆಸ್ ಭಯ ಬಿದ್ದಿದೆ. ಕಾಂಗ್ರೆಸ್ ವೈಫಲ್ಯಕ್ಕೆ ಜನರು ನುಗ್ಗಿ ಬಡಿಯುವ ದಿನ ದೂರವಿಲ್ಲ, ಜನರೇ ಬೀದಿಗೆ ಇಳಿದರೆ ಏನಾದೀತು ಎಂದು ಎಚ್ಚರಿಸಿದರು.
ಮುಡಾ ಹಗರಣದ ಬಗ್ಗೆ ಇಡಿಗೆ ಸ್ಪಷ್ಟ ಪುರಾವೆ ಸಿಕ್ಕಿರುವ ಕುರಿತು ಮಾತನಾಡಿದ ಅವರು, ಮುಡಾದಲ್ಲಿ ಭ್ರಷ್ಟಾಚಾರ ನಡೆದಿರುವುದಕ್ಕೆ ಸ್ಪಷ್ಟ ಪುರಾವೆ ಜಾರಿ ನಿರ್ದೇಶನಾಲಯದ (ಇಡಿ) ಕೈಗೆ ಸಿಕ್ಕಿದೆ. ಈಗ ಮುಖ್ಯಮಂತ್ರಿಗಳು ಏನು ಹೇಳುತ್ತಾರೆ? ಮುಡಾದಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎನ್ನುತ್ತಾರಾ? ಅಥವಾ ಭ್ರಷ್ಟಾಚಾರ ನಡೆದಿರುವುದನ್ನು ಒಪ್ಪಿಕೊಂಡು ತಮ್ಮ ಜವಾಬ್ದಾರಿ ಹೊತ್ತುಕೊಳ್ಳುವರೇ? ಇ.ಡಿ 99 ಆಸ್ತಿಗಳನ್ನು ವಶಕ್ಕೆ ತೆಗೆದುಕೊಂಡಿದ್ದರೆ, ಅಲ್ಲಿಗೆ ಭ್ರಷ್ಟಾಚಾರ ನಡೆದಿರುವುದು ಅಂಗೈ ಹುಣ್ಣಿನಷ್ಟು ಸ್ಪಷ್ಟವಾಗಿದೆ ಎಂದು ಅರ್ಥವಾಗುತ್ತದೆ. ಈ ಹಿನ್ನೆಲೆಯಲ್ಲಿ ಉಳಿದೆಲ್ಲರಿಗೂ ನೈತಿಕತೆಯ ಪಾಠ ಹೇಳುವ ಮುಖ್ಯಮಂತ್ರಿಗಳು ಈಗ ನೈತಿಕತೆಯ ಪಾಠವನ್ನು ತಮಗೂ ಅನ್ವಯ ಮಾಡಿಕೊಳ್ಳಬೇಕಿದೆ. ತಪ್ಪಿತಸ್ಥರ ಮೇಲೆ ಕ್ರಮ ಆಗಲಿ ಎಂದು ಆಗ್ರಹಿಸಿದರು.ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ | ಸರ್ಕಾರದ ಕ್ರಮಗಳ ಬಗ್ಗೆ ವರಿಷ್ಠರಿಗೆ ವಿವರಿಸಿದ್ದೇನೆ – ಸಿದ್ದರಾಮಯ್ಯ