ಬೆಂಗಳೂರು: ದಿನಕ್ಕೊಂದು ವೇಷ ಹಾಕುವ ವ್ಯಕ್ತಿಯೂ ನಾವಲ್ಲ, ದಿನಕ್ಕೊಂದು ವೇಷ ಹಾಕುವ ಪಾರ್ಟಿಯೂ ನಮ್ಮದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ (DK Shivakumar) ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸಂವಿಧಾನ ಬದ್ಧವಾಗಿ ಮೀಸಲಾತಿ ಕೊಡುವ ಕೆಲಸ ಮಾಡಿದ್ದೇವೆ. ಆದರೆ ಕಾಂಗ್ರೆಸ್ನವರಿಗೆ (Congress) ಇದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರು ಮೀಸಲಾತಿ ಹೆಸರಿನ ಮೂಲಕ ಬಿಜೆಪಿ (BJP) ಸರ್ಕಾರವನ್ನು ಅಸ್ತಿರಗೊಳಿಸುವ ಕೆಲಸ ಮಾಡಿದರು. ಆದರೆ ಒಬಿಸಿ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಅನ್ಯಾಯ ಆಗದ ರೀತಿಯ, ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದೇವೆ. ಕಾನೂನು ಬದ್ಧವಾಗಿ ಮಾಡಿರುವ ಕ್ರಮದ ಬಗ್ಗೆ ವಿವರವನ್ನು ಆದಷ್ಟು ಬೇಗ ಕೊಡುತ್ತೇವೆ ಎಂದು ಭರವಸೆ ನೀಡಿದರು.
2008, 2018ರಲ್ಲಿ ಬಿಜೆಪಿ ಪರ ಅಲೆ ಇದ್ದರೂ ಗುರಿ ಮುಟ್ಟಲು ಆಗಿರಲಿಲ್ಲ. ಹಳೆ ಮೈಸೂರು ಭಾಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಯಾವುದೇ ಪಕ್ಷ ಯಶಸ್ವಿ ಆಗಲು ಸಾಧ್ಯವಿಲ್ಲ. ನಾವು ಯಾರ ಮೇಲೂ ಅವಲಂಬಿತರಾಗದೇ ಸರ್ಕಾರ ಮಾಡಲು ಅಲ್ಲಿ ಸಂಘಟನೆ ಮಾಡಬೇಕು. 2023ರಲ್ಲಿ ಗೆಲ್ಲುವ ಶಾರ್ಟ್ ಟರ್ಮ್, ಪಕ್ಷ ಸಂಘಟನೆಯ ಲಾಂಗ್ ಟರ್ಮ್ ಯೋಜನೆ ಮಾಡುತ್ತಿದ್ದೇವೆ ಎಂದರು.
ಹಳೆ ಮೈಸೂರು ಭಾಗದಲ್ಲಿ ನಾವು ದುರ್ಬಲರಾಗಿದ್ದೇವೆ. ಪಕ್ಷ ಬೆಳೆಸುವುದು ನಿರಂತರ ಕಾರ್ಯ, ಅದನ್ನು ನಾವು ಮಾಡುತ್ತೇವೆ. ಅದಕ್ಕೆ ಏನು ಬೇಕಾದರೂ ಹೆಸರು ಕೊಡಬಹುದು. ಪ್ರಭಾವಿಗಳ ಸಂಪರ್ಕದಲ್ಲಿದ್ದೇವೆ, ಅವರನ್ನು ಟಾರ್ಗೆಟ್ ಮಾಡಿ ಸಂಪರ್ಕ ಮಾಡಿ ಸೆಳೆಯುವ ಪ್ರಯತ್ನ ಮಾಡುತ್ತೇವೆ. ನಾವು ಓಪನ್ ಆಗಿದ್ದರೆ ಹಲವು ಜನ ಬರುತ್ತಾರೆ, ರಿಸರ್ವ್ ಆಗಿದ್ದರೆ ಬರಲ್ಲ ಎಂದು ಹೇಳಿದರು.
ಮಂಡ್ಯದಲ್ಲಿ ಭಾಷಣ ವೇಳೆ ಮುಲ್ಲಾಸಾಬ್ ಹಾಗೂ ಹನುಮಪ್ಪನ ನಡುವಿನ ಚುನಾವಣೆ ಅಂದಿದ್ದಕ್ಕೆ ಸ್ಪಷ್ಟನೆ ನೀಡಿದ ಅವರು, ಮುಡಲಗಿರಿ ಹುನಮನ ದೇವಸ್ಥಾನದ ಮೇಲೆ ಮಸೀದಿ ಕಟ್ಟಿರೋದು ಅಂಗೈ ಹುಣ್ಣಿನಷ್ಟೇ ಸತ್ಯ. ಹೀಗಾಗಿ ಹೇಳಿದ್ದೇನೆ. ಅಭಿವೃದ್ಧಿ ಮಾಡಿದ್ದು ಒಡೆಯರ್. ಆದರೆ ಕಾಂಗ್ರೆಸ್ನವರು ಟಿಪ್ಪು ಅಭಿವೃದ್ಧಿ ಮಾಡಿದ ಅಂತಾರೆ. ಅವರು ಟಿಪ್ಪುವಿನ ಕ್ರೌರ್ಯವನ್ನು ವೈಭಕರಿಸುತ್ತಾರೆ. ಹೀಗಾಗಿ ಟಿಪ್ಪು vs ಒಡೆಯರ್ ನಡುವಿನ ಚುನಾವಣೆ ಎಂದಿದ್ದೇನೆ. ಮತಾಂಧರಿಗೆ ಟಿಪ್ಪು ನಾಯಕ, ಹಾಗಾಗಿ ಅವರಿಗೆ ಟಿಪ್ಪು ನಾಯಕ, ಐಕಾನ್ ಎಂದು ಕಿಡಿಕಾರಿದರು. ಇದನ್ನೂ ಓದಿ: ಗುಟ್ಕಾ ತಿಂದು ಉಗುಳಿದಕ್ಕೆ ಗಲಾಟೆ – ಕೊಲೆಯಲ್ಲಿ ಅಂತ್ಯ
ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೋಲಿಸುವ ವಿಚಾರಗಿವಾಗಿ ಪ್ರತಿಕ್ರಿಯಿಸಿದ ಅವರು, ನಾವು ನಕಾರಾತ್ಮಕವಾಗಿ, ವೈಯಕ್ತಿಕವಾಗಿ ಯಾರನ್ನು ಸೋಲಿಸಲು ಹೋಗಲ್ಲ. ಆದರೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ನಮ್ಮ ಪಕ್ಷದ ಅಭ್ಯರ್ಥಿಗಳ ವಿರುದ್ಧ ಯಾವುದೇ ಎದುರಾಳಿಯಾಗಿರಲಿ ಅವರನ್ನು ಸೋಲಿಸುವ ಪ್ರಯತ್ನ ಮಾಡುತ್ತೇವೆ. ಆ ರೀತಿಯ ವ್ಯೆಯಕ್ತಿವಾಗಿ ಸೋಲಿಸುವ ಪ್ರಯತ್ನದ ಬಗ್ಗೆ ಪರಮೇಶ್ವರ್ರನ್ನು ಕೇಳಿ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಜೆಡಿಎಸ್ ಸೇರಿದಂತೆ ರಾಜ್ಯದಲ್ಲಿ ಯಾವುದೇ ಪ್ರಾದೇಶಿಕ ಪಕ್ಷ ಪರಿಣಾಮ ಬೀರದು: ಶ್ರೀರಾಮುಲು