ಶಿವಮೊಗ್ಗ: ದೀಪಾವಳಿ ಆದ ಮೇಲೆ ವೇಷದವರು ಬರುತ್ತಾರೆ. ಆದರೆ ವೇಷ ತೊಟ್ಟವರು ಈಗ ದಸರಾ ವೇಳೆಗೆ ಬಂದಿದ್ದಾರೆ ಎಂದು ಬಿಜೆಪಿ ಶಾಸಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ವೇಳೆ ಮಾತನಾಡಿದ ಅವರು, ಇಂಥ ನೀಚ ಮುಖ್ಯಮಂತ್ರಿಯನ್ನು ನಾನು ಕಂಡಿರಲಿಲ್ಲ. ಈ ನೀಚನನ್ನು ಬೆಳಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದೇನೆ ಎಂದು ಹೇಳಿದ್ದ ದೇವೇಗೌಡರು ಈಗ ಸಿದ್ದರಾಮಯ್ಯ ಜೊತೆ ಕುಳಿತುಕೊಂಡು ಸುದ್ದಿಗೋಷ್ಠಿ ನಡೆಸಿದ್ದಾರೆ. ಈಗ ಈ ಜಂಟಿ ಪತ್ರಿಕಾಗೋಷ್ಠಿ ಸೌಭಾಗ್ಯನೋ ಅಥವಾ ದೌರ್ಭಾಗ್ಯನೋ ಎನ್ನುವುದನ್ನು ಅವರೇ ಹೇಳಬೇಕು ಎಂದರು.
ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ದೂರ ಇಡುವುದೇ ನನ್ನ ಗುರಿ ಎಂದು ದೇವೇಗೌಡರು ಹೇಳಿದ್ದರು. ದೇವೇಗೌಡರ ಈ ಮಾತಿಗೆ ಸಿದ್ದರಾಮಯ್ಯ ದೇವೇಗೌಡರದು ಧೃತರಾಷ್ಟ್ರ ಆಲಿಂಗನ. ಎಲ್ಲರನ್ನೂ ಮುಗಿಸುತ್ತಾರೆ. ನಾನು ತಪ್ಪಿಸಿಕೊಂಡು ಬಂದು ಸಿಎಂ ಆದೆ ಎಂದಿದ್ದರು. ಈಗ ಈ ಆಲಿಂಗನ ಎಂತಹದ್ದು ಎನ್ನುವುದನ್ನು ಸಿದ್ದರಾಮಯ್ಯನವರೇ ಸ್ಪಷ್ಟ ಪಡಿಸಬೇಕು ಎಂದು ವ್ಯಂಗ್ಯವಾಡಿದರು.
ಬಿಜೆಪಿ ನೇರವಾಗಿ ಯುದ್ಧ ಮಾಡುತ್ತದೆ. ಯಾರ ಬೆನ್ನಿಗೂ ಚೂರಿ ಹಾಕುವ ಕೆಲಸ ಮಾಡಿಲ್ಲ. ಸೈದ್ಧಾಂತಿಕವಾಗಿ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿಯನ್ನು ಬೈದಿದ್ದು ಬಿಟ್ಟರೆ ರಾಜ್ಯದ ಅಭಿವೃದ್ಧಿ ಬಗ್ಗೆ ಒಂದೇ ಒಂದು ಮಾತು ಆಡುತ್ತಿಲ್ಲ. ರಾಜಕೀಯ ಅಂಧಾಕಾರ ಎದುರಾಗುತ್ತದೆ ಎಂಬ ಕಾರಣಕ್ಕೆ ಬಿಜೆಪಿ ಬಗ್ಗೆ ಅಪಾರ ಹೆದರಿಕೆ ಇದೆ. ಹೊಟ್ಟೆ ಒಳಗೆ ವಿಷ ಇದ್ದರೂ ತೋರಿಕೆಗೆ ಒಂದಾಗಿದ್ದೇವೆ ಎಂದು ಜೆಡಿಎಸ್, ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಅವರೊಳಗೆ ಸಹಮತ ಇಲ್ಲದೆ ಏಕತೆಯ ಪ್ರದರ್ಶನ ನಾಟಕೀಯವಾಗಿತ್ತು. ಎರಡೂ ಪಕ್ಷಗಳು ನಮ್ಮ ರಾಜಕೀಯ ವಿರೋಧಿಗಳು ಪರಸ್ಪರ ಮುಗಿಸಲು ಹವಣಿಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಎಷ್ಟು ಕಾಲ ಒಟ್ಟಿಗೆ ಇರಲು ಸಾಧ್ಯ ಎಂದು ಸಿಟಿ ರವಿ ಪ್ರಶ್ನೆ ಮಾಡಿದರು.