ಸುಮಲತಾಗೆ ಭರವಸೆ ಕೊಟ್ಟ ಪುಟ್ಟರಾಜು

Public TV
2 Min Read
PUTTARAJU

ಶಿವಮೊಗ್ಗ: ನಮ್ಮ ಜಿಲ್ಲೆಯ ಯಾವುದೇ ಪಕ್ಷದ ನಾಯಕರಿಗೆ, ಮುಖಂಡರಿಗೆ ತೊಂದರೆ ಆಗದೇ ಇರುವ ರೀತಿ ನೋಡಿಕೊಳ್ಳುತ್ತೇನೆ. ಯಾವುದೇ ಭಯ ಬೇಡ ಎಂದು ಸುಮಲತಾ ಅಂಬರೀಶ್ ಮಾಡಿದ್ದ ಆರೋಪಕ್ಕೆ ಮಂಡ್ಯ ಜಿಲ್ಲಾ ಉಸ್ತವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಭರವಸೆ ಕೊಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುಟ್ಟರಾಜು ಅವರು, ನನ್ನ ಜಿಲ್ಲೆ ಚುನಾವಣೆಯ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯಾವುದೇ ಪಕ್ಷದ ನಾಯಕರು ಆ ರೀತಿ ಮಾಡಲ್ಲ. ಹೀಗಾಗಿ ಯಾವುದೇ ಸಂದರ್ಭದಲ್ಲೂ ನಮ್ಮ ಜಿಲ್ಲೆಯ ಯಾವುದೇ ಪಕ್ಷದ ನಾಯಕರಿಗೆ, ಮುಖಂಡರಿಗೆ ತೊಂದರೆ ಆಗದೇ ಇರುವ ರೀತಿ ನೋಡಿಕೊಳ್ಳುತ್ತೇನೆ. ಇದು ಜಿಲ್ಲಾ ಉಸ್ತುವಾರಿ ಸಚಿವನಾಗಿ ನನ್ನ ಜವಾಬ್ದಾರಿ ಆಗಿದೆ ಎಂದು ಸುಮಲತಾಗೆ ಭರವಸೆ ನೀಡಿದರು.

Sumalatha Ambareesh

ಯಾವುದೇ ಭಯ ಬೇಡ, ಎಲ್ಲರಿಗೂ ರಕ್ಷಣೆ ಕೊಡುತ್ತೇವೆ. ಚುನಾವಣೆ ಮುಗಿದ ಮೇಲೆ ದ್ವೇಷ ಇಲ್ಲ ಎಂದು ಹೇಳುವ ಮೂಲಕ ತಮ್ಮ ಬೆಂಬಲಿಗರಿಗೆ ಕಿರುಕುಳ ನೀಡಲಾಗುತ್ತಿದೆ ಎನ್ನುವ ಸುಮಲತಾ ಆರೋಪಕ್ಕೆ ಪ್ರತಿಕ್ರಿಯಿಸಿದರು.

ಮಂಡ್ಯದಲ್ಲಿ ಸುಮಲತಾ ಬಿಜೆಪಿ ಸೇರಲ್ಲ ಅಂತ ಹೇಳಿದ್ದರು. ಆದರೆ ಸುಮಲತಾಗೆ ವೋಟ್ ಹಾಕಿ ಅಂತ ಚಾಮರಾಜನಗರದಲ್ಲಿ ಇದ್ದುಕೊಂಡು ಯಡಿಯೂರಪ್ಪ ಪ್ರಚಾರ ಮಾಡಿದ್ದರು. ಕಳ್ಳತನ ಮಾಡುವವರಿಗೆ ದೂರದಲ್ಲಿ ನಿಂತು ಟಾರ್ಚ್ ಹಾಕಿ ಸಹಾಯ ಮಾಡಿದಂತೆ ಪ್ರಧಾನಿ ಮೋದಿ ಮತ್ತು ಯಡಿಯೂರಪ್ಪ ಸುಮಲತಾ ಅವರಿಗೆ ಸಹಾಯ ಮಾಡಿದರು ಎಂದು ವ್ಯಂಗ್ಯವಾಡಿದರು.

vlcsnap 2019 04 21 14h12m48s584

ಅವರು ಹೇಳಿದಂತೆ ಯಾವ ರೀತಿ ನಿಖಿಲ್ ಕುಮಾರಸ್ವಾಮಿ ಸೋಲುತ್ತಾರೆ ಅಂತ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಯಡಿಯೂರಪ್ಪ ಮಗನನ್ನು ಶಿವಮೊಗ್ಗ ಜಿಲ್ಲೆಯಲ್ಲೇ ಕಿತ್ತು ಎಸೆಯಬೇಕು ಎಂದು ಜನರು ನಿರ್ಧಾರ ಮಾಡಿದ್ದಾರೆ. ಈ ಹಿಂದೆ ನಡೆದ ಉಪಚುನಾವಣೆಯಲ್ಲೇ ನಾವು ಸ್ವಲ್ಪ ಗಂಭೀರವಾಗಿ ತೆಗೆದುಕೊಂಡಿದ್ದರೆ, ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಸರಿಸಬಹುದಾಗಿತ್ತು ಎಂದು ಪುಟ್ಟರಾಜು ಅವರು ಹೇಳಿದರು.

ಸುಮಲತಾ ಹೇಳಿದ್ದೇನು?
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸುಮಲತಾ ಅವರು, ಚುನಾವಣೆ ಮುಗಿದಿದೆ. ಈಗ ನಮ್ಮ ಬೆಂಬಲಿಗರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಸಂಬಂಧ ಎಸ್‍ಪಿ (ಪೊಲೀಸ್ ಅಧೀಕ್ಷಕ) ಗಮನಕ್ಕೆ ತರುತ್ತೇನೆ. ನನ್ನ ಬೆಂಬಲಿಗರ ಪರವಾಗಿ ನಾನು ನಿಲ್ಲುತ್ತೇನೆ. ನನ್ನ ಪರವಾಗಿ ನಿಂತ ಚಿತ್ರನಟರು ಪ್ರಾಯಶ್ಚಿತ್ತ ಪಡಬೇಕಾಗುತ್ತದೆ ಎಂದು ಸಿಎಂ ಹೇಳಿದ್ದಾರೆ. ಇದರ ಅರ್ಥ ಏನು ಅಂತ ಗೊತ್ತಾಗಬೇಕು. ಯಾರಿಗೆ ಬೆದರಿಕೆ ಹಾಕುತ್ತಿದ್ದಾರೆ ಗೊತ್ತಾಗಬೇಕು ಎಂದು ಆಗ್ರಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *