ಮಂಡ್ಯ: ತಮ್ಮ ಮನೆಯ ಆವರಣದಲ್ಲಿ ಮಾಡಲಾಗಿದೆ ಎನ್ನಲಾದ ಮಾಟ ಮಂತ್ರದ ನಿವಾರಣೆಗಾಗಿ ರೈತ ಕುಟುಂಬವೊಂದು ಬಸಪ್ಪನ ಮೊರೆ ಹೋಗಿರುವ ಘಟನೆ ಜಿಲ್ಲೆ ನಾಗಮಂಗಲ ತಾಲೂಕಿನ ಚಿಕ್ಕವೀರನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊನ್ನಲಗೇಗೌಡ ಎಂಬವರೇ ತಮ್ಮ ಮನೆಯಲ್ಲಿನ ಸಮಸ್ಯೆ ಪರಿಹಾರಕ್ಕಾಗಿ ಬಸವನ ಮೊರೆ ಹೋಗಿದ್ದರು. ರೈತ ಮನೆಯವರಿಗೆ ಯಾರೋ ಮಾಟ ಮಾಡಿಸಿದ್ದಾರೆ. ಅದನ್ನ ಮನೆಯ ಆವರಣದಲ್ಲಿ ಎಲ್ಲೋ ಒಂದು ಕಡೆ ಹೂತು ಹಾಕಿದ್ದಾರೆ ಎಂಬ ಬಗೆಗೆ ಅನುಮಾನಗೊಂಡಿದ್ದನು. ಈ ರೀತಿಯ ಮಾಟ ಮಂತ್ರಗಳನ್ನ ಗುರುತಿಸಿ ನಿವಾರಿಸುವುದರಲ್ಲಿ ಹೆಸರುವಾಸಿಯಾಗಿರುವ ರಾಮನಗರ ಜಿಲ್ಲೆಯ ಜಯಪುರ ಗ್ರಾಮದ ಶ್ರೀ ತಾಯಿ ಚಾಮುಂಡೇಶ್ವರಿ ದೇವಿಯ ಬಸವನನ್ನು ಊರಿಗೆ ಕರೆಸಿದ್ದಾರೆ.
ಊರಿಗೆ ಬಂದ ಬಸಪ್ಪನಿಗೆ ಭಕ್ತಿ ಪೂರ್ವಕವಾಗಿ ಪೂಜೆ ಸಲ್ಲಿಸಿದ ನಂತರ ಬಸಪ್ಪ ಹೊನ್ನಲಗೇಗೌಡರ ಮನೆಯ ಮುಂದೆ ಎರಡು ಕಡೆ ಹೂತಿಟ್ಟಿದ್ದ ಎರಡು ಮಾಟದ ವಸ್ತುಗಳನ್ನು ಪತ್ತೆ ಹಚ್ಚಿದೆ. ಮಾಟ ಮಾಡಿ ಹೂತಿಟ್ಟಿದ್ದ ಸ್ಥಳವನ್ನ ತನ್ನ ಪಾದದ ಮೂಲಕ ತೋರಿಸಿಕೊಟ್ಟಿದೆ. ನಂತರ ಅಲ್ಲಿ ಗುಂಡಿ ತೆಗೆಸಿ ನೋಡಿದಾಗ ಮಾಟ ಮಾಡಿ ಹೂತಿಟ್ಟಿರುವುದು ಬೆಳಕಿಗೆ ಬಂದಿದೆ.