ವಾಷಿಂಗ್ಟನ್: ಕೊರೊನಾ ಸಾಂಕ್ರಾಮಿಕವು ಶಾಶ್ವತವಾಗಿ ಮುಂದುವರಿಯಲು ಸಾಧ್ಯವಿಲ್ಲ. ಶೀಘ್ರವೇ ಅದು ಅಂತ್ಯವಾಗಲಿದೆ ಎಂದು ಅಮೆರಿಕ ವೈರಾಣು ತಜ್ಞ ಡಾ. ಕುತುಬ್ ಮಹ್ಮದ್ ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ ಶಾಶ್ವತವಾಗಿ ಮುಂದುವರಿಯುವುದು ಅಸಾಧ್ಯ. ಅದರ ಅಂತ್ಯವು ಬಹಳ ಬೇಗ ಆಗಲಿದೆ. ಈ ಚೆಸ್ ಆಟದಲ್ಲಿ ವಿಜೇತರಿಲ್ಲ. ಈ ಪಂದ್ಯ ಡ್ರಾ ಆಗಲಿದೆ. ವೈರಸ್ ಅಡಗಿಕೊಳ್ಳಲಿದ್ದು, ನಾವು ನಿಜವಾಗಿಯೂ ಗೆಲ್ಲುತ್ತೇವೆ. ಆ ಸಂದರ್ಭಕ್ಕೆ ನಾವು ತುಂಬಾ ಹತ್ತಿರವಾಗುತ್ತಿದ್ದೇವೆ. ನಾವು ಶೀಘ್ರವೇ ಸಾಂಕ್ರಾಮಿಕ ರೋಗದ ಬಂಧನದಿಂದ ಮುಕ್ತರಾಗುತ್ತೇವೆ ಎಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಸೋಂಕಿತರಿಗೆ ಮನೆಯಲ್ಲೇ ಆರೈಕೆ: ಸುಧಾಕರ್
ಮನುಷ್ಯರಲ್ಲಿ ಬದಲಾಗುತ್ತಿರುವ ರೋಗನಿರೋಧಕ ಶಕ್ತಿಗೆ ರೂಪಾಂತರಗೊಳ್ಳಲು ಮತ್ತು ಹೊಂದಿಕೊಳ್ಳಲು ವೈರಸ್ ಮೇಲೆ ಒತ್ತಡವಿದೆ. ಹೀಗಾಗಿ ಹಲವು ರೂಪಾಂತರಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಇದು ಒಂದು ಆಟದಂತೆ. ವೈರಸ್ ನಮ್ಮನ್ನು ಸೋಲಿಸಲು ರೂಪಾಂತರಗೊಳ್ಳುತ್ತಿರುತ್ತದೆ. ನಾವು ವೈರಸ್ ಅನ್ನು ಸೋಲಿಸಲು ಫೇಸ್ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್, ಸಾಮಾಜಿಕ ಅಂತರ, ಕೋವಿಡ್ ಲಸಿಕೆಗಳು ಮೊದಲಾದ ಆಯುಧಗಳನ್ನು ಪ್ರಯೋಗಿಸುತ್ತಿದ್ದೇವೆ ಎಂದು ವಿಶ್ಲೇಷಿಸಿದ್ದಾರೆ.
ಭಾರತದಲ್ಲಿ ಈವರೆಗೆ ಶೇ.60ರಷ್ಟು ಮಂದಿ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿರುವುದಕ್ಕೆ ತಜ್ಞ ಮಹ್ಮದ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದು ಭಾರತ ಮತ್ತು ಅಲ್ಲಿನ ಲಸಿಕಾ ತಯಾರಿಕರಿಗೆ ನಿಜವಾಗಿಯೂ ದೊಡ್ಡ ಸಾಧನೆಯಾಗಿದೆ. ಭಾರತೀಯ ಲಸಿಕೆಗಳನ್ನು ಜಾಗತಿಕವಾಗಿ ಬಳಸಲಾಗುತ್ತಿದೆ. ಒಂದು ವರ್ಷದಲ್ಲಿ ಲಸಿಕೆ ವಿತರಣೆಯಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಸೆಂಟರ್ನಿಂದ ಬಂದವನ ಬೈಕ್ ಸೀಜ್- ವ್ಯಕ್ತಿಯಿಂದ ಪೊಲೀಸರಿಗೇ ಕ್ಲಾಸ್!
ಬೂಸ್ಟರ್ ಡೋಸ್ ಓಮಿಕ್ರಾನ್ ವಿರುದ್ಧ ಶೇ.90ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎಂದು ಕೋವ್ಯಾಕ್ಸಿನ್ ತಯಾರಿಕಾ ಸಂಸ್ಥೆ ಹೇಳಿದೆ. ಭಾರತ್ ಬಯೋಟೆಕ್ ತಯಾರಿಸಿದ ಭಾರತದ ವಿಶಿಷ್ಟ ಉತ್ಪನ್ನ ಕೋವ್ಯಾಕ್ಸಿನ್, 2 ವರ್ಷದ ಮಕ್ಕಳಲ್ಲೂ ಸುರಕ್ಷತೆಯನ್ನು ಸಾಬೀತುಪಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.