ಕೋಲಾರ: ಪೊಲೀಸ್ ಠಾಣೆ ಎದುರೇ ನವದಂಪತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಎದುರು ನಡೆದಿದೆ.
ಕೋಲಾರ ತಾಲೂಕು ದಂಡಿಗಾನಹಳ್ಳಿ ಗ್ರಾಮದ ನವದಂಪತಿಯಾದ ಹೇಮಂತ್ ಕುಮಾರ್ ಹಾಗೂ ಚೈತ್ರ ಪೊಲೀಸರ ಎದುರೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಗ್ರಾಮಾಂತರ ಪೊಲೀಸರು ನವದಂಪತಿಯನ್ನು ರಕ್ಷಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ 9 ತಿಂಗಳ ಹಿಂದೆ ದಂಡಿಗಾನಹಳ್ಳಿಯ ಹೇಮಂತ್ ಕುಮಾರ್ ಪಕ್ಕದ ನೆರ್ನಹಳ್ಳಿಯ ಚೈತ್ರರನ್ನು ಮದುವೆಯಾಗಿದ್ದರು. ಅಂತರ್ಜಾತಿ ವಿವಾಹದ ಹಿನ್ನೆಲೆಯಲ್ಲಿ ಎರಡೂ ಕುಟುಂಬಂಗಳು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿತ್ತು.
ಮದುವೆಯಾಗಿ ಕೆಲ ತಿಂಗಳು ಬೇರೆ ಮನೆ ಮಾಡಿದ್ದ ದಂಪತಿ ವಾಸವಾಗಿದ್ದರು. ಈಗ ಪತ್ನಿ ಗರ್ಭಿಣಿಯಾದ ಹಿನ್ನೆಲೆಯಲ್ಲಿ ಹೇಮಂತ್ ಕುಮಾರ್ ತನ್ನ ಮನೆಗೆ ಪತ್ನಿಯನ್ನು ಕರೆದುಕೊಂಡು ಬಂದಿದ್ದಾರೆ. ದಿನದಿಂದ ದಿನಕ್ಕೆ ಕಿರುಕುಳ ಹೆಚ್ಚಾಗುತ್ತಿದ್ದು, ಇಂದು ನವದಂಪತಿ ಇಬ್ಬರು ಪೊಲೀಸ್ ಠಾಣೆಯ ಎದುರು ಬಾಟಲಿನಲ್ಲಿ ತಂದಿದ್ದ ಸೀಮೆಎಣ್ಣೆಯನ್ನು ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅಲ್ಲಿದ್ದ ಪೊಲೀಸರು ಕಾರ್ಯಪ್ರವೃತ್ತರಾಗಿ ನವದಂಪತಿಯನ್ನು ರಕ್ಷಣೆ ಮಾಡಿದ್ದಾರೆ.
ಚೈತ್ರ ಆರೋಪ ಏನು?
ಪತಿಯ ತಂದೆ ಶ್ರೀನಿವಾಸ್, ತಾಯಿ ಮುನಿರತ್ನಮ್ಮ ಮತ್ತು ತಮ್ಮ ಕಾರ್ತಿಕ್ ಕಿರುಕುಳ ನೀಡುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ನನ್ನ ಕಾಲು ಹಾಗೂ ಕೈ ಮೇಲೆ ಹಲ್ಲೆ ಮಾಡಿದ್ದಾರೆ. ಹೀಗಾಗಿ ಅತ್ತೆ, ಮಾವ ಮತ್ತು ಮೈದುನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚೈತ್ರ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv