ವಿಜಯಪುರ: ಲಂಚ ಕೇಳಿದ ಪೊಲೀಸ್ ಪೇದೆಗೆ ಸಾರ್ವಜನಿಕರು ರಸ್ತೆಯಲ್ಲಿಯೇ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಇಟಗಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಬಾಗಲಕೋಟೆಯ ಜಾಲಗೇರಿ ತಾಂಡ 1ರ ಕೆಲವರು ಬಾಗಲಕೋಟೆಯ ಬಸವೇಶ್ವರ ದೇವಸ್ಥಾನಕ್ಕೆ ಕ್ರೂಸರ್ ವಾಹನದಲ್ಲಿ ತೆರಳಿದ್ದರು. ಇಂದು ಬೆಳಿಗ್ಗೆ ದೇವರ ದರ್ಶನ ಮುಗಿಸಿಕೊಂಡು ಮತ್ತೆ ಹಿಂದಿರುಗಿ ಜಾಲಗೇರಿಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ವಿಜಯಪುರದ ಇಟಗಿ ಪೆಟ್ರೋಲ್ ಬಂಕ್ ಬಳಿ ಗಾಂಧಿ ಚೌಕ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಬಸವಾರಾಜ ಪುಜಾರಿ ಕ್ರೂಸರ್ ವಾಹನ ತಡೆದು 200 ರೂ. ಲಂಚ ಕೇಳಿದ್ದಾನೆ. ಆಗ ವಾಹನದಲ್ಲಿದವರು ಲಂಚ ನೀಡಲು ನಿರಾಕರಿಸಿ ಮುಂದೆ ಸಾಗಿದ್ದಾರೆ.
ಪೊಲೀಸ್ ಪೇದೆ ಬಸವರಾಜ ಇದರಿಂದ ಕೋಪಗೊಂಡು ತನ್ನ ಬೈಕ್ ತಗೆದುಕೊಂಡು ಹೋಗಿ ಮತ್ತೆ ವಾಹನವನ್ನು ಅಡ್ಡಗಟ್ಟಿದ್ದಾನೆ. ಆಗ ವಾಹನದಲ್ಲಿದ್ದ ಬಾಲಕಿ ಅಶ್ವಿನಿಯ ತಲೆಗೆ ಪೆಟ್ಟು ಬಿದ್ದಿದೆ. ಇದರಿಂದ ಆಕ್ರೋಶಗೊಂಡ ಅಶ್ವಿನಿ ಸಂಬಂಧಿಕರು ಮತ್ತು ಸ್ಥಳದಲ್ಲಿದ್ದ ಸಾವರ್ಜನಿಕರು ಸೇರಿ ಪೇದೆಗೆ ರಸ್ತೆಯಲ್ಲಿಯೇ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಸದ್ಯಕ್ಕೆ ಗಾಯಗೊಂಡಿರುವ ಅಶ್ವಿನಿಯನ್ನು ಹಾಗೂ ಪೇದೆ ಬಸವರಾಜು ಅವನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಗಾಂಧಿ ಚೌಕ ಪೊಲೀಸ್ರ ಭೇಟಿ ನೀಡಿದ್ದಾರೆ.