ಬೆಂಗಳೂರು: `ಬಿಜೆಪಿ ಉಳಿಸಿ’ ಅಂತ ಅತೃಪ್ತರ ಜೊತೆ ಸಭೆ ನಡೆಸಿ, ತಮ್ಮ ವಿರುದ್ಧ ಕಿಡಿಕಾರಿದ್ದ ಈಶ್ವರಪ್ಪ ವಿರುದ್ಧ ಕಂಪ್ಲೆಂಟ್ ಕೊಡೋಕೆ ಅಂತ ಯಡಿಯೂರಪ್ಪ ದೆಹಲಿಗೆ ತರಳಿದ್ದಾರೆ. ಅದಕ್ಕೂ ಮುಂಚೆಯೇ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ವಿರುದ್ಧ ನೊಂದ ಬಿಜೆಪಿ ಕಾರ್ಯಕರ್ತರ ಹೆಸರಿನಲ್ಲಿ ಅಮಿತ್ ಷಾ ಅವರಿಗೆ ಪತ್ರ ಬರೆಯಲಾಗಿದೆ.
ಕಾರ್ಯಕರ್ತರ ನೋವಿಗೆ ಬಿಎಸ್ವೈ ಸ್ಪಂದಿಸುತ್ತಿಲ್ಲ. ಯಡಿಯೂರಪ್ಪನವರಿಗೆ ಭ್ರಷ್ಟಾಚಾರವೇ ಬಂಡವಾಳ. ಸಿಎಂ ಆದರೆ ಮತ್ತೆ ಚಾಳಿ ಮುಂದುವರಿಸಬಹುದು. ಬಿಎಸ್ವೈ ಗೆ ಲಿಂಗಾಯಿತರನ್ನ ಆಕರ್ಷಿಸುವ ಶಕ್ತಿ ಕುಂದಿದೆ. ಒಂದು ಕೋಮಿಗೆ ಮಾತ್ರ ಅತೀ ಪ್ರಾಶಸ್ತ್ಯ ನೀಡಲಾಗ್ತಿದೆ. ಉಪಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿ. ಉಪಚುನಾವಣೆಗೆ 60 ಕೋಟಿ ಸಂಗ್ರಹಿಸಿದ್ರು. ಅದರಲ್ಲಿ ಖರ್ಚು ಮಾಡಿದ್ದು 20 ಕೋಟಿ ಮಾತ್ರ. ಉಳಿದ ಹಣ ವೈಯಕ್ತಿಕ ಬಳಕೆಗೆ ವೆಚ್ಚ ಮಾಡಿದ್ದಾರೆ. ಈ ಬಗ್ಗೆ ಸಾಕ್ಷ್ಯಾಧಾರಗಳಿವೆ. ಆಡಿಯೋ -ವಿಡಿಯೋ ಕ್ಲಿಪಿಂಗ್ಸ್ ಇವೆ. ಕೊಡಲು ಸಿದ್ಧ. ಬಿಎಸ್ವೈ ವಿರುದ್ಧವೇ ಶಿಸ್ತು ಕ್ರಮ ಜರುಗಿಸಿ ಅಂತ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಮಿತ್ ಷಾ ಸೇರಿದಂತೆ 19 ನಾಯಕರಿಗೆ ಪತ್ರದ ಪ್ರತಿಯನ್ನ ರವಾನಿಸಲಾಗಿದೆ. ಆದ್ರೆ ಪತ್ರದಲ್ಲಿ ಯಾರ ಸಹಿಯೂ ಇಲ್ಲ. ಈ ಮಧ್ಯೆ ದೆಹಲಿಯಲ್ಲಿರೋ ಬಿಎಸ್ವೈಗೆ ಅಮಿತ್ ಷಾ ಸಿಗುತ್ತಿಲ್ಲ. ಹೀಗಾಗಿ, ಕೇವಲ ರಾಮ್ಲಾಲ್ ಅವ್ರನ್ನ ಮಾತ್ರ ಭೇಟಿಯಾಗ್ತಿದ್ದಾರೆ.