– ಹಸಿದವರಿಗೆ ಅನ್ನ, ನೀರು ನೀಡಿದ ಖಾಕಿ
ಬೆಂಗಳೂರು: ಕೊರೊನಾ ವೈರಸ್ ಸೃಷ್ಟಿಸಿದ ಆತಂಕದಲ್ಲಿ ಪೊಲೀಸರು ಜನರು ನಿಯಮ ಪಾಲಿಸುವಂತೆ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಹಸಿದವರಿಗೆ ಅನ್ನ, ನೀರು ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಇಂತಹದ್ದೇ ದೃಶ್ಯಗಳು ಶನಿವಾರ ರಾತ್ರಿ ಮೆಜೆಸ್ಟಿಕ್ನ ಬಿಎಂಟಿಸಿ ನಿಲ್ದಾಣದಲ್ಲಿ ಕಂಡು ಬಂದವು.
ಬೆಂಗಳೂರಿನ ವಿವಿಧ ಪ್ರದೇಶಗಳಿಂದ ನೂರಾರು ಜನರು ಶನಿವಾರ ರಾತ್ರಿಯೇ ಮೆಜೆಸ್ಟಿಕ್ಗೆ ಬಂದು ತಲುಪಿದ್ದರು. ಉತ್ತರ ಕರ್ನಾಟಕದ ವಲಸೆ ಕಾರ್ಮಿಕರು ಊಟ, ನಿದ್ದೆಯಿಲ್ಲದೆ ಈಡೀ ರಾತ್ರಿ ಜಾಗರಣೆ ಮಾಡಿದರು. ಅವರ ಹಸಿವಿನ ಸಂಕಟಕ್ಕೆ ಸ್ಪಂದಿಸಿದ ಪೊಲೀಸರು ಬಿಸ್ಕೇಟ್, ನೀರು ಹಂಚಿದರು. ಜೊತೆಗೆ ಮಕ್ಕಳು ಮತ್ತು ವಯೋವೃದ್ಧರಿಗೆ ಸ್ಯಾನಿಟೈಸರ್ ಹಾಕಿ ಮಾನವೀಯತೆ ಮೆರೆದರು. ಇದನ್ನೂ ಓದಿ: ಮೆಜೆಸ್ಟಿಕ್ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಜನ ಜಾತ್ರೆ- ಸಾಮಾಜಿಕ ಅಂತರ ಮರೆತ ಜನ
ಓರ್ವ ಪೊಲೀಸ್ ಸಿಬ್ಬಂದಿ ಮಗುವನ್ನು ಎತ್ತಿಕೊಂಡು ಕುಳಿತಿದ್ದ ಮಹಿಳೆ ಬಳಿ ಹೋಗಿ ಆಹಾರ ನೀಡಿದರು. ಜೊತೆಗೆ ‘ಹುಷಾರಾಗಿ ನಿಮ್ಮೂರಿಗೆ ಹೋಗಿ. ಪುಟ್ಟ ಮಗು ಇದೆ’ ಎಂದು ಧೈರ್ಯ ತುಂಬಿದ ದೃಶ್ಯಗಳು ಕಂಡು ಮೆಜೆಸ್ಟಿಕ್ನಲ್ಲಿ ಕಂಡು ಬಂದವು. ಇದನ್ನೂ ಓದಿ: ಯಾವ ಜಿಲ್ಲೆಯಲ್ಲಿ ಎಷ್ಟು ಕಂಟೈನ್ಮೆಂಟ್ ಝೋನ್?
ವಲಸೆ ಕಾರ್ಮಿಕರು, ತಮ್ಮ ಊರುಗಳಿಗೆ ಹೋಗಲು ಮೆಜಸ್ಟಿಕ್ಗೆ ಬಂದಿದ್ದ ಜನರು ರಾತ್ರಿಯಲ್ಲಾ ನರಕಯಾತನೆ ಅನುಭವಿಸುವಂತಾಗಿತ್ತು. ಮಹಿಳೆಯರಿಗೆ ಬಯಲು ಶೌಚವೇ ಗತಿಯಾಗಿತ್ತು. ಕೆಲವರು ಮಕ್ಕಳನ್ನು ತಮ್ಮ ಪಕ್ಕದಲ್ಲೇ ಮಲಗಿಸಿಕೊಂಡು ರಾತ್ರಿ ಕಳೆದರು.