ನವದೆಹಲಿ: ಕೊರೊನಾ ವೈರಸ್ ಹಾವಳಿಯಿಂದ ನಲುಗುತ್ತಿರುವ ಇಟಲಿಯಿಂದ ಭಾರತಕ್ಕೆ ಮರಳಿದ್ದ ಕನ್ನಡಿಗರು ಇಂದು ಬೆಂಗಳೂರಿಗೆ ಬರಲಿದ್ದಾರೆ.
ಇಟಲಿಯಲ್ಲಿ ನೆಲೆಸಿದ್ದ ಕನ್ನಡಿಗರು ದೆಹಲಿಗೆ ಮರಳಿದ್ದರು. ಇವರನ್ನು ಮನೆಗೆ ಕಳುಹಿಸದೇ 25 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಕ್ವಾರಂಟೈನ್ ವೇಳೆ ಕೊರೊನಾ ಪರೀಕ್ಷೆ ನಡೆಸಿದ್ದು ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಇಂದು ರಾಜ್ಯಕ್ಕೆ ಮರಳಲಿದ್ದಾರೆ.
ಕರ್ನಾಟಕ ಭವನ ನಿವಾಸಿ ಆಯುಕ್ತರ ನಿರ್ದೇಶನ ಮೇರೆಗೆ 17 ಮಂದಿ ಇಂದು ಸಂಜೆ ವಿಶೇಷ ಬಸ್ ಮೂಲಕ ಬೆಂಗಳೂರಿಗೆ ಹೊರಡಲಿದ್ದಾರೆ. 17 ಮಂದಿ ಕನ್ನಡಿಗರ ಜೊತೆಗೆ ತಮಿಳುನಾಡಿನ 14 ಮಂದಿಯೂ ಬರಲಿದ್ದಾರೆ.
ಬಸ್ ಆರಂಭದಲ್ಲಿ ಬೆಂಗಳೂರಿಗೆ ಬರಲಿದ್ದು, ಬಳಿಕ ಚೆನ್ನೈಗೆ ತೆರಳಲಿದೆ. ಬೆಂಗಳೂರು ಮೂಲಕ ಸ್ವಗ್ರಾಮಗಳಿಗೆ ತೆರಳಲು ಇವರಿಗೆ ವಿಶೇಷ ಪಾಸ್ ವ್ಯವಸ್ಥೆ ಮಾಡಲಾಗುತ್ತದೆ. ರೋಮ್ ನಿಂದ ಆಗಮಿಸಿರುವ 13 ಮಂದಿಯ ಮತ್ತೊಂದು ಟೀಂ ಸದ್ಯ ಕ್ವಾರಂಟೈನ್ ನಲ್ಲಿದೆ.
ಇಟಲಿಯಲ್ಲಿ 1.35 ಲಕ್ಷ ಮಂದಿಗೆ ಕೊರೊನಾ ಬಂದಿದ್ದು, 17 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 24 ಸಾವಿರಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ.