– ಕೊರೊನಾ ನಿವಾರಣೆಗೆ ಮಹಾ ಪ್ರತ್ಯಂಗಿರ ಹೋಮ
ಮೈಸೂರು: ಕೊರೊನಾ ನಿವಾರಣೆಗೆ ಒಂದೆಡೆ ಪ್ರತ್ಯಂಗಿರ ಹೋಮ ಮಾಡಲಾಗುತ್ತಿದ್ದು, ಇನ್ನೊಂದೆಡೆ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಅನಗತ್ಯವಾಗಿ ಸಂಚರಿಸುವ ವಾಹನಗಳ ಮಾಲೀಕರಿಗೆ ನೋಟಿಸ್ ನೀಡುತ್ತಿದ್ದಾರೆ.
ಕೊರೊನಾ ಸೋಂಕು ಹರಡುವಿಕೆಯ ಭೀತಿಯಲ್ಲಿ ಜನರ ಅನಗತ್ಯ ಸಂಚಾರ ನಿಲ್ಲಿಸಲು ಮೈಸೂರು ಪೊಲೀಸರು ಹೊಸ ಪ್ಲ್ಯಾನ್ ಮಾಡಿದ್ದಾರೆ. ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಕಾರು ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದೆ. ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡರಿಂದ ನೋಟಿಸ್ ನೀಡಲಾಗತ್ತಿದೆ. ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದೀರಿ ನಿಮ್ಮ ವಿರುದ್ಧ ಏಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್ನಲ್ಲಿ ಪ್ರಶ್ನಿಸಲಾಗಿದೆ.
ಕಾರು ಮಾಲೀಕರಿಗೆ ಪೊಲೀಸರಿಂದ ನೋಟಿಸ್ ನೀಡಲಾಗುತ್ತಿದ್ದು, ಲಾಕ್ಡೌನ್ ವೇಳೆ ಅನಗತ್ಯವಾಗಿ ನಗರದಲ್ಲಿ ಸಂಚರಿಸಿರುವ 303 ವಾಹನಗಳನ್ನು ಸೀಜ್ ಮಾಡಲಾಗಿದೆ. 285 ದ್ವಿಚಕ್ರ ವಾಹನಗಳು, 10 ತ್ರಿ ಚಕ್ರ ವಾಹನಗಳು, 08 ನಾಲ್ಕು ಚಕ್ರ ವಾಹನಗಳು ಸೇರಿ ಒಟ್ಟು 303 ವಾಹನಗಳನ್ನು ಸೀಜ್ ಮಾಡಲಾಗಿದೆ.
ಮಹಾಪ್ರತ್ಯಂಗಿರ ಹೋಮ
ಮೈಸೂರಿನ ಶೆಟ್ಟನಾಯಕನಹಳ್ಳಿಯ ಮಹಾಪ್ರತ್ಯಂಗಿರ ದೇವಾಲಯದಲ್ಲಿ ಕೊರೊನಾ ನಿವಾರಣೆಗಾಗಿ ಮಹಾಪ್ರತ್ಯಂಗಿರ ಹೋಮ ಮಾಡಲಾಗಿದ್ದು, ಪೂಜೆ ನಡೆದಿದೆ. ಸರ್ಕಾರದ ಆದೇಶದಂತೆ ದೇವಾಲಯ ಬಾಗಿಲು ಹಾಕಿದ್ದ ಅರ್ಚಕರು, ನಿನ್ನೆ ರಾತ್ರಿ ದೇವಾಲಯದ ಆವರಣದಲ್ಲಿ ಕೋವಿಡ್-19 ಶತ್ರು ಸಂಹಾರ ಪ್ರತ್ಯಂಗಿರ ಹೋಮ ನೆರವೇರಿಸಿದ್ದಾರೆ.
ಪ್ರತ್ಯಂಗಿರ ದೇವಾಲಯದ ಸಂಸ್ಥಾಪಕ ಯಾಗವಿದಾನಂದ ತಾಂತ್ರಿಕ್ ಅರ್ಚಕರು ಹೋಮ ಮಾಡಿದ್ದು, ಜಗತ್ತಿಗೆ ಪ್ರತ್ಯಂಗಿರ ದೇವಿ ತಾಯಿಯಾಗಿದ್ದಾಳೆ. ಇಂದು ಜಗತ್ತಿಗೆ ಕಂಟಕವಾಗಿರೋ ಕೊರೊನಾ ನಿವಾರಣೆಗೆ ಪ್ರಾರ್ಥನೆ ಸಲ್ಲಿಸಿದ್ದೇವೆ. ನೀವೂ ನಿಮ್ಮ ಮನೆಗಳಲ್ಲಿ ಇಷ್ಟ ದೇವರಿಗೆ ಪ್ರಾರ್ಥನೆ ಸಲ್ಲಿಸಿ. ಆಸ್ತಿಕರಾಗಿ ನಾವೆಲ್ಲ ಕೊರೊನಾ ವಿರುದ್ಧ ಹೋರಾಡೋಣ ಎಂದು ಹೇಳಿದ್ದಾರೆ.