ಚಿಕ್ಕಬಳ್ಳಾಪುರ: ಕೊರೊನಾ ವೈರಸ್ನಿಂದಾಗಿ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ನಲುಗಿ ಹೋಗುವಂತಾಗಿದೆ. ದ್ರಾಕ್ಷಿ ಖರೀದಿಗೆ ವರ್ತಕರು ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯ ರೇಣುಮಾಕಲಹಳ್ಳಿಯಲ್ಲಿ ರೈತನೊಬ್ಬ ದ್ರಾಕ್ಷಿ ಕಟಾವು ಮಾಡಿ ಟ್ರ್ಯಾಕ್ಟರ್ಗೆ ತುಂಬಿಕೊಂಡು ಹೋಗಿ ತಿಪ್ಪೆಗೆ ಸುರಿದಿದ್ದಾನೆ.
ಮುನಿಶಾಮಪ್ಪ ದ್ರಾಕ್ಷಿ ಹಣ್ಣನ್ನು ತಿಪ್ಪೆಗೆ ಸುರಿದಿದ್ದಾನೆ. ಕಟಾವಿಗೆ ಸಿದ್ಧವಾಗಿದ್ದ ದ್ರಾಕ್ಷಿ ಖರೀದಿಗೆ ವರ್ತಕರು ಯಾರೂ ಬರುತ್ತಿಲ್ಲ. ಟ್ರಾನ್ಸ್ಪೋರ್ಟ್ ಸಮಸ್ಯೆ ಸೇರಿದಂತೆ ಮಾರಾಟ ಸಮಸ್ಯೆಯಿಂದ ಖರೀದಿಗೆ ವರ್ತಕರು ಮುಂದಾಗುತ್ತಿಲ್ಲ. ಹೀಗಾಗಿ ಜಿಲ್ಲೆಯಾದ್ಯಾಂತ ಅದರಲ್ಲೂ ಪ್ರಮುಖವಾಗಿ ಚಿಕ್ಕಬಳ್ಳಾಪುರ ತಾಲೂಕಿನ ರೈತರು ಹೆಚ್ಚಾಗಿ ದ್ರಾಕ್ಷಿ ಬೆಳೆಯುತ್ತಾರೆ. ಹೀಗಾಗಿ ಜಿಲ್ಲೆಯಾದ್ಯಾಂತ ಸುಮಾರು 6000 ಎಕರೆ ಪ್ರದೇಶದಲ್ಲಿ ವರ್ಷಕ್ಕೆ ಎರಡು ಬೆಳೆ ತೆಗೆಯಲಾಗುತ್ತೆ.
ಸದ್ಯ 2500 ಎಕರೆ ಪ್ರದೇಶದಲ್ಲಿ ಸರಿಸುಮಾರು 200 ಕೋಟಿ ಮೌಲ್ಯದ 40 ಸಾವಿರ ಟನ್ ದ್ರಾಕ್ಷಿ ಕಟಾವಿಗೆ ಸಿದ್ಧವಾಗಿದೆ. ಆದರೆ ಈಗ ಖರೀದಿಗೆ ವರ್ತಕರು ಬಾರದೆ ಇಷ್ಟೊಂದು ಟನ್ ದ್ರಾಕ್ಷಿ ತೋಟಗಳಲ್ಲೇ ಕೊಳೆಯುವಂತಾಗಿದೆ. ತೋಟದಲ್ಲಿ ಹಾಗೆ ಬಿಟ್ಟರೆ ಮುಂದಿನ ಬೆಳೆಗೆ ಸಂಕಷ್ಟ ಅಂತ ಕೆಲ ರೈತರು ಕಟಾವು ಮಾಡಿ ತಿಪ್ಪೆಗೆ ಸುರಿಯುತ್ತಿದ್ದಾರೆ. ಹೀಗಾಗಿ ಕೊರೊನಾದಿಂದ 200 ಕೋಟಿ ಮೌಲ್ಯದ ದ್ರಾಕ್ಷಿನೂ ತಿಪ್ಪೆ ಸೇರುತ್ತಾ ಎಂಬ ಆತಂಕ ರೈತರಲ್ಲಿ ಮೂಡಿದೆ.
ಕೊರೊನಾ ಎಫೆಕ್ಟ್ನಿಂದ ಜಿಲ್ಲೆಯ ರೈತರು ತತ್ತರಿಸಿ ಹೋಗುತ್ತಿದ್ದಾರೆ. ಬ್ಯಾಂಕುಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ, ಬರನಾಡಲ್ಲಿ ಬೆಳೆದ ಬೆಳೆಗಳು ಕಣ್ಣೆದುರೇ ನಾಶವಾಗುತ್ತಿರುವುದನ್ನು ನೋಡಿ ರೈತರ ಕಣ್ಣಲ್ಲಿ ಕಣ್ಣೀರು ತರಿಸುವಂತಿದೆ.