ದುಬೈ: ಇಸ್ಲಾಂ ಧರ್ಮವನ್ನು ಅವಹೇಳನ ಮಾಡಿದ್ದ ಕರ್ನಾಟಕದ ಹಾವೇರಿ ಮೂಲದ ಯುವಕ ಜೈಲುಪಾಲಾಗುವ ಸಾಧ್ಯತೆಯಿದೆ.
ರಾಣೇಬೆನ್ನೂರಿನ ರಾಕೇಶ್ ಬಿ. ಕಿತ್ತೂರಮಠ್ ಯುಎಇಯ ಎಮ್ರಿಲ್ ಸರ್ವೀಸ್ ಎಂಬ ಖಾಸಗಿ ಸಂಸ್ಥೆಯಲ್ಲಿ ಟೀಮ್ ಲೀಡರ್ ಆಗಿದ್ದ. ಕೊರೊನಾ ವೈರಸ್ ವಿಚಾರದಲ್ಲಿ ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಒಂದನ್ನು ಫೇಸ್ಬುಕ್ ನಲ್ಲಿ ರಾಕೇಶ್ ಹಾಕಿದ್ದ.
ಈ ಪೋಸ್ಟ್ ಪ್ರಕಟವಾದ ಬೆನ್ನಲ್ಲೇ ರಾಕೇಶನನ್ನು ಸಂಸ್ಥೆ ವಜಾಗೊಳಿಸಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಎಮ್ರಿಲ್ ಸರ್ವಿಸಸ್ನ ಸಿಇಒ ಸ್ಟುವರ್ಟ್ ಹ್ಯಾರಿಸನ್ ಪ್ರತಿಕ್ರಿಯಿಸಿ, “ಸಂಸ್ಥೆಯಿಂದ ಈ ಕೂಡಲೇ ರಾಕೇಶ್ ವಜಾಗೊಂಡಿದ್ದು, ಅವರನ್ನು ದುಬೈ ಪೊಲೀಸರಿಗೆ ಹಸ್ತಾಂತರಿಸಲಾಗುವುದು. ಯಾವುದೇ ಧರ್ಮದ ವಿರುದ್ಧ ಪೋಸ್ಟ್ ಮಾಡುವವರನ್ನು ನಮ್ಮ ಸಂಸ್ಥೆ ಕ್ಷಮಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಈಗ ಯುಎಇನಲ್ಲಿ ರಾಕೇಶ್ ನೆಲೆಸಿದ್ದಾರೋ? ಇಲ್ಲವೋ ಎನ್ನುವುದನ್ನು ಸಂಸ್ಥೆ ಪತ್ತೆ ಮಾಡುತ್ತಿದೆ. ಅವರು ಇನ್ನೂ ಇಲ್ಲೇ ನೆಲೆಸಿದ್ದರೆ ದುಬೈ ಪೊಲೀಸರಿಗೆ ಹಸ್ತಾಂತರಿಸಲಾಗುವುದು. ನಮ್ಮ ಸಂಸ್ಥೆಯಲ್ಲಿ 8,500ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ನಮ್ಮಲ್ಲಿ ಪ್ರತಿ ರಾಷ್ಟ್ರೀಯತೆ, ಧರ್ಮ ಮತ್ತು ಹಿನ್ನೆಲೆಯಿಂದ ಬಂದವರನ್ನು ಸಮಾನವಾಗಿ ನೋಡಲಾಗುತ್ತದೆ ಎಂದು ಹ್ಯಾರಿಸನ್ ತಿಳಿಸಿದ್ದಾರೆ.
ಎಲ್ಲಾ ಧಾರ್ಮಿಕ ಅಥವಾ ಜನಾಂಗೀಯ ತಾರತಮ್ಯವನ್ನು ನಿಷೇಧಿಸಿ ಯುಎಇ 2015 ರಲ್ಲಿ ಕಾನೂನು ತಂದಿದೆ. ಭಾಷಣ, ಬರಹ, ಆನ್ಲೈನ್ ಮಾಧ್ಯಮದಲ್ಲಿ ಯಾವುದೇ ಧರ್ಮದವನ್ನು ನಿಂದಿಸಿ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ.
ಈ ಮೊದಲು ಅಬುಧಾಬಿ ನಿವಾಸಿ ಮಿತೇಶ್ ಉದೇಶಿ ವ್ಯಂಗ್ಯವಾಗಿ ಇಸ್ಲಾಂ ಕಾರ್ಟೂನ್ ಮಾಡಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದ. ಉದ್ಯೋಗಕಾಂಕ್ಷಿ ಭಾರತೀಯ ಮುಸ್ಲಿಮರು ಮರಳಿ ಪಾಕಿಸ್ತಾನಕ್ಕೆ ಹೋಗಿ ಎಂದು ಪೋಸ್ಟ್ ಹಾಕಿದ್ದ. ಈ ಸಂಬಂಧ ದೂರು ದಾಖಲಾದ ಹಿನ್ನೆಲೆಯಲ್ಲಿ ಆತನನ್ನು ಕೆಲಸದಿಂದ ತೆಗೆಯಲಾಗಿತ್ತು.