ಬೆಂಗಳೂರು: ಕರ್ನಾಟಕದಲ್ಲಿ ಮೊದಲ ಕೊರೊನಾ ಕೇಸ್ ದೃಢಪಟ್ಟ ಬೆನ್ನಲ್ಲೇ ಮಕ್ಕಳ ಪರೀಕ್ಷೆಗಳನ್ನು ಬೇಗ ಮುಗಿಸಲು ಶಿಕ್ಷಣ ಇಲಾಖೆ ಆದೇಶ ನೀಡಿದೆ.
ಬೆಂಗಳೂರು ಹೊರುಪಡಿಸಿ ರಾಜ್ಯದ ಉಳಿದೆಡೆ ಪರೀಕ್ಷೆಗಳನ್ನು ಬೇಗ ಮುಗಿಸಿ ಮಕ್ಕಳಿಗೆ ರಜೆ ನೀಡುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಆರೋಗ್ಯ ಆಯುಕ್ತರ ಸಲಹೆ ಮೇರೆಗೆ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲೆಗಳ LKG, UJG ಶಾಲೆಗಳಿಗೆ ನಾಳೆಯಿಂದ ರಜೆ ಘೋಷಿಸಲಾಗಿದೆ.
— S.Suresh Kumar (@nimmasuresh) March 8, 2020
ಮಾ.16ಕ್ಕೆ 5ನೇ ತರಗತಿಗೆ ಪರೀಕ್ಷೆ ಮುಗಿಸಬೇಕು. ಮಾರ್ಚ್ 23ರೊಳಗೆ 6ರಿಂದ 9ನೇ ತರಗತಿವರೆಗಿನ ಪರೀಕ್ಷೆ ಮುಗಿಯಬೇಕು. 1ರಿಂದ 4ನೇ ತರಗತಿಗೆ ಮುಂದಿನ ಪರೀಕ್ಷಾ ದಿನಾಂಕ ಪ್ರಕಟ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಇಲಾಖೆ ತಿಳಿಸಿದೆ.
ಕೊರೋನಾ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಎಲ್ಲಾ ಪ್ರೈಮರಿ ಶಾಲೆಗಳ ಐದನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಅನಿರ್ದಿಷ್ಟಾವಧಿವರೆಗೂ ರಜೆ ಘೋಷಿಸಲಾಗಿದೆ. ಈ ಮೊದಲು ಪ್ರೀ ಕೆಜಿ, ಎಲ್ಕೆಜಿ, ಯುಕೆಜಿ ಮಕ್ಕಳಿಗೆ ಮಾರ್ಚ್ 31ರವರೆಗೂ ಸರ್ಕಾರ ರಜೆ ಘೋಷಿಸಲಾಗಿತ್ತು. ಆದ್ರೆ ಬೆಂಗಳೂರಿನಲ್ಲಿ ಕೊರೋನಾ ಪಾಸಿಟಿವ್ ಕೇಸ್ ಕಂಡು ಬಂದ ಹಿನ್ನೆಲೆಯಲ್ಲಿ ರಜೆಯನ್ನು ಐದನೇ ತರಗತಿವರೆಗೂ ವಿಸ್ತರಿಸಲಾಗಿದೆ. ಮಾರ್ಚ್ 17ರವರೆಗೂ ಬೆಂಗಳೂರು ವ್ಯಾಪ್ತಿಯ ಅಂಗನವಾಡಿಗಳಿಗೂ ರಜೆ ಘೋಷಿಸಲಾಗಿದೆ.
ಮಾರ್ಚ್ 1ರಂದು ಅಮೆರಿಕದಿಂದ 40 ವರ್ಷದ ಟೆಕ್ಕಿ ಕರ್ನಾಟಕಕ್ಕೆ ಬಂದಿದ್ರು. ಬೆಳಗ್ಗೆ 8.30ಕ್ಕೆ ಬಂದಾಗ ಟೆಕ್ಕಿಯನ್ನು ವೈದ್ಯಕೀಯ ತಪಾಸಣೆ ಮಾಡಲಾಗಿದ್ದು, ಈ ವೇಳೆ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿದ್ವು. ರಕ್ತದ ಮಾದರಿಯನ್ನು ಪುಣೆಯ ವೈರಾಣು ಲ್ಯಾಬ್ಗೆ ಕಳಿಸಲಾಗಿತ್ತು. ಇದೀಗ ವರದಿ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿದೆ. ಟೆಕ್ಕಿಯ ಮೂವರು ಕುಟುಂಬ ಸದಸ್ಯರು ಮತ್ತವರ ಕಾರು ಚಾಲಕನನ್ನ ಟೆಕ್ಕಿಯಿಂದ ಪ್ರತ್ಯೇಕಗೊಳಿಸಿ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗ್ತಿದೆ.
ಮಾರ್ಚ್1 ರಂದು ಟೆಕ್ಕಿ ಬಂದ ವಿಮಾನದಲ್ಲಿದ್ದವರನ್ನು ಕಂಡುಹಿಡಿಯುವ ಕೆಲಸ ನಡೆಯುತ್ತಿದೆ. ಅಲ್ಲದೇ, ಟೆಕ್ಕಿ ಜೊತೆ ಸಂಪರ್ಕ ಹೊಂದಿದ್ದವರನ್ನು ಗುರುತಿಸಿ ಚಿಕಿತ್ಸೆ ನೀಡುವ ಕಾರ್ಯ ಸಹ ನಡೆದಿದೆ. ಅಷ್ಟೇ ಅಲ್ಲದೆ ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಬೆಂಗಳೂರಿನ ಎಂಟು ಮಂದಿ ಸೇರಿದಂತೆ 12 ಮಂದಿ ಮೇಲೆ ನಿಗಾ ಇರಿಸಲಾಗಿದೆ. ಇವರಲ್ಲಿ ಬಾಗಲಕೋಟೆ ಮತ್ತು ಹಾಸನ ಜಿಲ್ಲೆಯ ತಲಾ ಒಬ್ಬರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರ ಮೇಲೆ ಕಣ್ಣಿಡಲಾಗಿದೆ.