ಮಡಿಕೇರಿ: ಕೊಡಗಿನಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ದಾಖಲಾಗುವಷ್ಟರಲ್ಲೇ ನೇರವಾಗಿ ಮತ್ತು ಪರೋಕ್ಷವಾಗಿ 300ಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿದ್ದಾನೆ ಎನ್ನುವ ಅಘಾತಕಾರಿ ವಿಷಯ ಬಹಿರಂಗವಾಗಿದೆ.
ಮಾರ್ಚ್ 15ರಂದು ದುಬೈನಿಂದ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಬಂದು ಬಳಿಕ ಕೊಡಗಿಗೆ ಬಂದಿದ್ದ ವ್ಯಕ್ತಿಗೆ ಗುರುವಾರ ಸೋಂಕು ಇರುವುದು ಖಚಿತವಾಗಿತ್ತು. ಬಳಿಕ ಈ ವ್ಯಕ್ತಿಯ ಪ್ರಯಾಣದ ಜಾಡು ಹಿಡಿದು ತನಿಖೆ ನಡೆಸಿದ ಜಿಲ್ಲಾಡಳಿತಕ್ಕೆ ಶಾಕಿಂಗ್ ಮಾಹಿತಿ ಸಿಕ್ಕಿದೆ. ಈ ವ್ಯಕ್ತಿಯೂ 300ಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿದ್ದಾನೆ ಎಂದು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ಮಾಹಿತಿ ನೀಡಿದ್ದಾರೆ.
ಇವರೆಲ್ಲರಿಗೂ ಹೋಂ ಕ್ವಾರಂಟೈನ್ ಮಾಡಲಾಗಿದ್ದು, ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದೇವೆ. ವ್ಯಕ್ತಿಯ ಮನೆಯ ಸುತ್ತ 75 ಮನೆಗಳಿರುವ ಪ್ರದೇಶವನ್ನು ಅತೀ ಸೂಕ್ಷ್ಮ. ಹಾಗೆಯೇ ಅಲ್ಲಿಂದ ಐದು ಕಿ.ಮೀ ವ್ಯಾಪ್ತಿಯನ್ನು ಸೂಕ್ಷ್ಮ ವಲಯಗಳು ಎಂದು ಘೋಷಿಸಿದ್ದೇವೆ ಎಂದರು.
ಅವರೆಲ್ಲರಿಗೂ ಮನೆ ಬಿಟ್ಟು ಬರದಂತೆ ಸೂಕ್ತ ಬಂದೋಬಸ್ತ್ ಮಾಡಿದ್ದೇವೆ. ಗ್ರಾಮದ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ವಾಹನ ಹಾಗೂ ಪ್ರತ್ಯೇಕ ಕೊಠಡಿಗಳಲ್ಲಿ ಬಿಇಓ ನೇತೃತ್ವದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಶಾಲಾ ಶಿಕ್ಷಕರು ವ್ಯಕ್ತಿಯ ನೇರ ಸಂಪರ್ಕ ಹೊಂದಿದ್ದರು. ನೇರ ಸಂಪರ್ಕದಲ್ಲಿದ್ದ ಶಿಕ್ಷಕರ ಜೊತೆಗೆ ಆ ಶಾಲೆಗಳ ಎಲ್ಲಾ ಶಿಕ್ಷಕರಿಗೂ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.