ಚಿಕ್ಕಮಗಳೂರು: ಇಡೀ ದೇಶವೇ ಕೊರೊನಾ ಫಿಯರ್ ನಿಂದ ಕಂಗಾಲಾಗಿದ್ರೆ, ತಾಲೂಕಿನ ಕರಿಸಿದ್ದನಹಳ್ಳಿಯಲ್ಲಿ ಈ ಭಯವನ್ನೇ ಅಡ್ವಾಂಟೇಜ್ ಮಾಡಿಕೊಂಡಿದ್ದಾರೆ.
ವೈರಸ್ ಭಯದಿಂದ ಜನ ಮನೆಯಿಂದ ಹೊರಬಾರದೆ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕರಿಸಿದ್ದನಹಳ್ಳಿಯ ಮನೆಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು. ಮದ್ಯ ಸಿಗುತ್ತಿದೆ ಎಂದು ಗೊತ್ತಾದ ಕೂಡಲೇ ಅಕ್ಕಪಕ್ಕದ ಗ್ರಾಮಸ್ಥರು ಕೂಡ ಕದ್ದು-ಮುಚ್ಚಿ ಮದ್ಯ ಖರೀದಿಸೋದಕ್ಕೆ ಬರುತ್ತಿದ್ದರು.
ಜನ ಗುಂಪಾಗಿ ಸೇರಬಾರದು ಎಂದು ದೇಶದ ಪ್ರಧಾನಿಯೇ ಮನವಿ ಮಾಡಿಕೊಂಡು ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದ್ದಾರೆ. ಹೀಗಿರುವಾಗ 25-30 ಮಂದಿ ಮದ್ಯ ಖರೀದಿಸುವುದಕ್ಕೆ ಕರಿಸಿದ್ದನಹಳ್ಳಿಯಲ್ಲಿ ಜಮಾಯಿಸುತ್ತಿದ್ದರು. ಕೆಲವರು ಕುಡಿದು ಗಲಾಟೆ ಮಾಡುತ್ತಿದ್ದರು. ಇದರಿಂದ ಸ್ಥಳಿಯರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿ, ಕರಿಸಿದ್ದನಹಳ್ಳಿ ಜನ ಕೆಂಗೇನಹಳ್ಳಿ ಗೇಟ್ ಬಳಿ ಗ್ರಾಮಕ್ಕೆ ಮದ್ಯ ಖರೀದಿಸಲು ಬರುತ್ತಿದ್ದ ಜನರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಾರ್ಗ ಮಧ್ಯೆಯೇ ಅಡ್ಡಗಟ್ಟಿ ಕೊರೊನಾದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಗ್ರಾಮಸ್ಥರ ವಿರುದ್ಧ ಗ್ರಾಮಸ್ಥರೇ ತಿರುಗಿ ಬಿದ್ದಿದ್ದು ಮದ್ಯ ಮಾರಾಟ ಮಾಡದಂತೆ ತಾಕೀತು ಮಾಡಿದ್ದಾರೆ.