ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಕೇಸ್‌ – ಜಿಲ್ಲಾ ಪಂಚಾಯತ್‌ ಪತ್ರವೇ ನಕಲು

Public TV
2 Min Read
eshwarappa santosh 3

– ಗ್ರಾಮೀಣಾಭಿವೃದ್ದಿ ಇಲಾಖೆ ದೂರು, ಎಫ್‌ಐಆರ್‌ ದಾಖಲು

ಬೆಂಗಳೂರು/ಬೆಳಗಾವಿ: ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್‌ ನೀಡಿದೆ ಎನ್ನಲಾದ ಅನುಮತಿ ಪತ್ರ ನಕಲು ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ತಿಳಿಸಿದೆ.

ಹಿಂಡಲಗಾ ಗ್ರಾಮದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಅಂದಿನ ಬೆಳಗಾವಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ, ಕಾಂಗ್ರೆಸ್‌ ನಾಯಕಿ ಆಶಾ ಐಹೊಳೆ 2021ರ ಫೆಬ್ರವರಿ 15ರಂದು 108 ಕಾಮಗಾರಿಗಳ ಪಟ್ಟಿ ಸಮೇತ ಬರೆದಿದ್ದ ಪತ್ರ ತನಿಖೆ ನಡೆಸುತ್ತಿರುವ ಉಡುಪಿ ಪೊಲೀಸರಿಗೆ ಲಭ್ಯವಾಗಿತ್ತು. ಇದನ್ನೂ ಓದಿ: ಸಂತೋಷ್ ಮಾಡಿದ ಕಾಮಗಾರಿಗಳಿಗೆ ಸರ್ಕಾರದಿಂದ ಅನುಮೋದನೆಯೇ ಸಿಕ್ಕಿಲ್ಲ: ದರ್ಶನ್ ಹೆಚ್‌ವಿ ಸ್ಫೋಟಕ ಮಾಹಿತಿ

Asha Aihole Santosh Patil letter

ಈ ಪತ್ರದಲ್ಲಿ ʼಅನುಮೋದನೆಗಾಗಿ ಆದೇಶಿಸಲಾಗಿದೆʼ ಎಂದು ಫೆಬ್ರವರಿ 26ರಂದು ಸಹಿ ಮಾಡಲಾಗಿತ್ತು. ಆದೇಶದ ಪ್ರತಿಗಳನ್ನು ಮಾರ್ಚ್ 5ರಂದು ನೀಡಲಾಗುವುದು’ ಎಂದು ಕೈಬರಹದಲ್ಲಿ ಬರೆದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯ ಕಾರ್ಯದರ್ಶಿ ಸಹಿ ಮತ್ತು ಸೀಲ್‌ ಹಾಕಲಾಗಿತ್ತು. ಈ ಪತ್ರದ ಅಧಾರದಲ್ಲಿ ಸಂತೋಷ್ ಕಾಮಾಗಾರಿಗಳನ್ನು ಮಾಡಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದನ್ನೂ ಓದಿ: ಹಿಂಡಲಗಾ ಗ್ರಾ.ಪಂ. ಅಧ್ಯಕ್ಷರಿಗೆ, ಸದಸ್ಯರಿಗೆ ಲೆಟರ್ ಕೊಟ್ಟಿದ್ದು ನಿಜ: ಆಶಾ ಐಹೊಳೆ

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯ ಕಾರ್ಯದರ್ಶಿ ಸಹಿ ಮತ್ತು ಸೀಲ್‌ ಇದ್ದ ಹಿನ್ನೆಲೆಯಲ್ಲಿ ಹಲವು ಅನುಮಾನಗಳು ಎದ್ದಿತ್ತು. ಈಗ ಈ ಪತ್ರವೇ ನಕಲಿ ಎಂದು ಹೇಳಿರುವ ಗ್ರಾಮೀಣಾಭಿವೃದ್ದಿ ಇಲಾಖೆ ವಿಧಾನಸೌಧ ಠಾಣೆಗೆ ದೂರು ನೀಡಿದೆ. ಅಧೀನ ಕಾರ್ಯದರ್ಶಿ ರಮೇಶ್ ದೂರು ನೀಡಿದ್ದು ಪೊಲೀಸರು ಈಗ ಎಫ್‌ಐಆರ್‌ ದಾಖಲು ಮಾಡಿ ನಕಲಿ ಪತ್ರ ಸೃಷ್ಟಿಸಿದವರ ವಿರುದ್ಧ ತನಿಖೆ ಆರಂಭಿಸಿದ್ದಾರೆ.

Asha Aihole Santosh Patil

ದರ್ಶನ್‌ ಹೇಳಿದ್ದೇನು?
ಸಂತೋಷ್ ಪಾಟಿಲ್‌ರ ಕಾಮಗಾರಿಗಳ ಕುರಿತಂತೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾ ಐಹೊಳೆಯವರ ಸಹಿಯನ್ನು ಪೋರ್ಜರಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅನುಮೋದನೆ ಪತ್ರದಲ್ಲಿರುವ ಸಹಿ ನನ್ನದಲ್ಲ ಎಂದು ಆಶಾ ಐಹೊಳೆ ಹೇಳಿದ್ದಾರೆ. ಈ ಕುರಿತಂತೆ ತನಿಖೆಯಿಂದಷ್ಟೇ ಎಲ್ಲಾ ಮಾಹಿತಿ ಹೊರಬೀಳಬೇಕಿದೆ ಎಂದು ಬೆಳಗಾವಿ ಸಿಇಒ ದರ್ಶನ್ ತಿಳಿಸಿದ್ದಾರೆ.

15ನೇ ಹಣಕಾಸಿನ ಆಯೋಗದಲ್ಲಿ ಗರಿಷ್ಠ ಎಂದರೂ 50 ರಿಂದ 60 ಲಕ್ಷ ರೂ. ಹಣ ಬರುತ್ತದೆ. ಆದರೆ 4 ಕೋಟಿ ರೂ. ಅನುದಾನ ಪಂಚಾಯತ್‌ಗೆ ಬರುವುದಿಲ್ಲ. ಪೊಲೀಸರಿಂದ ತನಿಖೆ ನಡೆಯುತ್ತಿದೆ. ನಮ್ಮ ಕಡೆಯಿಂದ ಏನು ಮಾಹಿತಿ ಬೇಕು ಅದನ್ನು ಕೊಡುತ್ತಿದ್ದೇವೆ. ಈ ಕುರಿತು ಪತ್ರ ಬರೆದಿರುವುದು ನಿಜ. ಅನುಮೋದನೆ ಎಂದು ಬರೆದಿರುವುದು ನಿಜವಲ್ಲ. ಈ ಬಗ್ಗೆ ತನಿಖೆ ಆಗಬೇಕು, ಆಗುತ್ತಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೂ ತಂದಿದ್ದೇನೆ. ಈ ಪತ್ರ ನೋಡಿದಾಗ ಪೋರ್ಜರಿ ಮಾಡಿದ್ದು ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *