ಕಂಟೈನರ್ ಲಾರಿ ಉರುಳಿ ಬಿದ್ದು ಬುಲೆಟ್ ಬೈಕ್ ಸಮೇತ ಸವಾರ ಅಪ್ಪಚ್ಚಿ!

Public TV
1 Min Read
CKB ACCIDENT 1

ಚಿಕ್ಕಬಳ್ಳಾಪುರ: ಬೃಹತ್ ಗಾತ್ರದ ಕಂಟೈನರ್ ಲಾರಿ ಪಲ್ಟಿಯಾದ ಪರಿಣಾಮ ರಸ್ತೆ ಬದಿ ಸಾಗುತ್ತಿದ್ದ ಬುಲೆಟ್ ಬೈಕ್ ಸಮೇತ ಸವಾರ ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೋಲಿಗೆರೆ ಗ್ರಾಮದ ಬಳಿ ನಡೆದಿದೆ.

ಚಿಕ್ಕಬೆಳವಂಗಲ ಗ್ರಾಮದ ವಿಜಯ್ ಕುಮಾರ್ (40) ಮೃತ ಬೈಕ್ ಸವಾರ. ದಾಬಸ್ ಪೇಟೆಯಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದ ಮೃತ ವಿಜಯ್ ಕುಮಾರ್ ತನ್ನ ಬುಲೆಟ್ ಬೈಕ್ ನಲ್ಲಿ ದಾಬಸ್ ಪೇಟೆ ಕಡೆಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

ದಾಬಸ್‍ಪೇಟೆ ಕಡೆಯಿಂದ ದೊಡ್ಡಬಳ್ಳಾಪುರದ ಕಡೆಗೆ ಸಂಚರಿಸುತ್ತಿದ್ದ ಮಹಾರಾಷ್ಟ್ರ ಮೂಲದ ಕಂಟೈನರ್ ಲಾರಿ ಕೋಲಿಗೆರೆ ಗೇಟ್ ಬಳಿ ರಸ್ತೆಯ ಗುಂಡಿ ತಪ್ಪಿಸಲು ಹೋಗಿ, ನಿಯತ್ರಣ ತಪ್ಪಿ ರಸ್ತೆ ಮಧ್ಯೆ ಉರುಳಿಬಿದ್ದಿದೆ. ಇದೇ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬರುತ್ತಿದ್ದ ಬುಲೆಟ್ ಬೈಕ್ ಮೇಲೆಯೇ ಲಾರಿ ಉರುಳಿಬಿದ್ದಿದೆ. ಪರಿಣಾಮ ಬುಲೆಟ್ ಸಮೇತ ಬೈಕ್ ಸವಾರ ವಿಜಯ್ ಕುಮಾರ್ ಲಾರಿಯಡಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

CKB ACCIDENT 2

ಈ ಘಟನೆಯ ಸಂಬಂಧ ಸ್ಥಳಕ್ಕೆ ಬಂದ ದೊಡ್ಡ ಬೆಳವಂಗಲ ಪೊಲೀಸರು ಹರಸಾಹಸ ಪಟ್ಟು ಕ್ರೇನ್ ಗಳ ಮುಖಾಂತರ ರಸ್ತೆ ಮಧ್ಯೆ ಉರುಳಿ ಬಿದ್ದಿದ್ದ ಕಂಟೈನರ್ ಲಾರಿಯನ್ನ ತೆರವುಗೊಳಿಸಿ, ಮೃತದೇಹವನ್ನ ಹೊರತೆಗೆದು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಈ ರಸ್ತೆ ರಾಷ್ಟ್ರೀಯ ಹೆದ್ದಾರಿ 207 ಆಗಿದ್ದು ಕಳೆದ 4 ವರ್ಷಗಳಿಂದಲೂ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಹಲವು ಕಡೆ ಭಾರೀ ಗಾತ್ರದ ಗುಂಡಿಗಳು ಬಿದ್ದಿವೆ. ಇನ್ನು ಇತ್ತೀಚೆಗೆ ಬಿದ್ದ ಮಳೆಯಿಂದ ಗುಂಡಿಗಳೆಲ್ಲಾ ಜಲಾವೃತವಾಗಿವೆ. ಹೀಗಾಗಿ ಪದೇ ಪದೇ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ ಅಂತ ಸ್ಥಳೀಯ ಗ್ರಾಮಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಘಟನೆ ನಂತರ ಕಂಟೈನರ್ ಲಾರಿ ಚಾಲಕ ಪರಾರಿಯಾಗಿದ್ದು, ದೊಡ್ಡಬೆಳವಂಗಲ ಪೊಲೀಸ್ ಠಾಣಾ ಪೊಲೀಸರು ಲಾರಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *