ಬೆಂಗಳೂರು: ದಸರಾ ಆನೆ ಅರ್ಜುನ (Dasara Elephant Arjuna) ಪ್ರಾಣ ಕಳೆದುಕೊಂಡ ಜಾಗ ಹಾಗೂ ಮೈಸೂರಿನ ಹೆಚ್.ಡಿ ಕೋಟೆಯಲ್ಲಿ ಸ್ಮಾರಕ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಅಂಬಾರಿ ಹೊತ್ತ ಅರ್ಜುನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅರ್ಜುನನ ಸಾವಿನ ಕುರಿತು ಸಂಪೂರ್ಣ ಮಾಹಿತಿ ಕೇಳಿದ್ದೇನೆ. ಅರ್ಜುನ ಆನೆ ಸಕಲೇಶಪುರದಲ್ಲಿ ಎಲ್ಲಿ ಪ್ರಾಣ ಕಳೆದುಕೊಂಡಿದ್ನೋ ಅಲ್ಲಿಯೇ ಸ್ಮಾರಕ ಮಾಡುತ್ತೇವೆ. ಹಾಗೂ ಹೆಗ್ಗಡದೇವನಕೋಟೆಯಲ್ಲಿಯೂ ಸ್ಮಾರಕ ಮಾಡಲು ತಿಳಿಸಿದ್ದೇವೆ ಎಂದರು.
ಅರ್ಜುನ ಎಂಟು ಬಾರಿ ದಸರಾ ಅಂಬಾರಿ ಹೊತ್ತಿದ್ದವನ ಅಚಾನಕ್ ಸಾವಾಗಿದೆ. ಆತ ಇನ್ನೂ ಹೆಚ್ಚು ಕಾಲ ಬದುಕಬೇಕಿತ್ತು, ಇನ್ನೊಂದು ಆನೆ ಕಾರ್ಯಾಚರಣೆಗೆ ಅರ್ಜುನ ನನ್ನ ಉಪಯೋಗಿಸಿದ ಕಾರಣ ಸಾವನಪ್ಪಿದೆ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ಅರ್ಜುನನ ದುರಂತ ಅಂತ್ಯ – ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ
ಇತ್ತ ಹಾಸನದಲ್ಲಿ ಮಾವುತ ವಿನು ಮಾತನಾಡುತ್ತಾ, ಅರ್ಜುನನ್ನು ನೆನೆದು ಕಣ್ಣೀರು ಹಾಕಿದರು. ಕಾದಾಟದ ವೇಳೆ ಕಾಲಿನಲ್ಲಿ ರಕ್ತ ಬಂತು. ಆದರೂ ಮದಗಜದ ಜೊತೆಗೆ ಹೋರಾಡಿದ. ನಂತರ ಮಿಸ್ ಫೈರ್ ಆಗಿ ಕಾಲಿಗೆ ಗುಂಡು ಬಿತ್ತು. ಪ್ರಶಾಂತ ಇಲ್ಲದಿದ್ದರೂ ಅರ್ಜುನ ಹೋರಾಡಿ ಗೆಲ್ಲುತ್ತಿದ್ದನು. ಆದರೆ ಕಾಲಿಗೆ ಬಿದ್ದ ಗಾಯದಿಂದ ಆಗಲಿಲ್ಲ. ಕಾಡಾನೆ ತಿವಿದು ಸಾಯಿಸಿತು. ಅರ್ಜುನ ಹತ್ತು ಜನರ ಪ್ರಾಣ ಉಳಿಸಿ ಸಾವನ್ನಪ್ಪಿದ್ದಾನೆ. ಹೀಗಾಗಿ ಮೈಸೂರಿನಲ್ಲೇ ಆತನ ಸ್ಮಾರಕ ಮಾಡಬೇಕು ಎಂದು ಕಣ್ಣೀರಿಡುತ್ತಲೇ ಸರ್ಕಾರಕ್ಕೆ ಒತ್ತಾಯಿಸಿದರು.