ಬೆಂಗಳೂರು: ಕಾಂಗ್ರೆಸ್ಗೆ ಗುಡ್ಬೈ ಹೇಳಿ ಬಿಜೆಪಿ ಸೇರಿದ ಉಮೇಶ್ ಜಾಧವ್ ಅವರಿಗೆ ಬಿಸಿ ಮುಟ್ಟಿಸಲು ಕೈ ನಾಯಕರು ಪ್ಲಾನ್ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಾಸಕರು ಸಲ್ಲಿಸಿದ ರಾಜೀನಾಮೆ ಅಂಗೀಕರಿಸದಂತೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಕಾಂಗ್ರೆಸ್ ಮನವಿ ಮಾಡಿಕೊಂಡಿದೆ.
ಉಮೇಶ್ ಜಾಧವ್ ಅವರ ರಾಜೀನಾಮೆ ಅಂಗೀಕರಿಸುವ ಮೊದಲು ನಮ್ಮ ದೂರನ್ನು ಇತ್ಯರ್ಥಗೊಳಿಸಿ. ನಮ್ಮ ದೂರು ಇತ್ಯರ್ಥಗೊಳ್ಳದೇ ಇರುವುದರಿಂದ ರಾಜೀನಾಮೆ ಅಂಗೀಕಾರ ಬೇಡ ಎಂದು ಸಿಎಲ್ಪಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಅವರು ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.
ಈ ಸಂಬಂಧ ಮನವಿ ಪತ್ರ ನೀಡಲು ಸ್ಪೀಕರ್ ರಮೇಶ್ ಕುಮಾರ್ ಅವರು ಕಚೇರಿ ಪಿ.ಆರ್.ರಮೇಶ್ ತೆರಳಿದ್ದರು. ಆದರೆ ಸ್ಪೀಕರ್ ಇಲ್ಲದ ಕಾರಣ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.
ಮನವಿ ಪತ್ರ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಪಿ.ಆರ್.ರಮೇಶ್ ಅವರು, ಉಮೇಶ್ ಜಾಧವ್ ವಿರುದ್ಧ ಪಕ್ಷಾಂತರ ಕಾಯಿದೆ ಅಡಿ ದೂರು ಕೊಟ್ಟಿದ್ದೇವೆ. ಶಾಸಕರು ಸಿಎಲ್ಪಿ ಹಾಗೂ ಅಧಿವೇಶಕ್ಕೆ ಗೈರಾಗಿದ್ದರು. ಈ ಸಂಬಂಧ ನೋಟಿಸ್ ನೀಡಿದ್ದರೂ ಯವುದೇ ಸೂಕ್ತ ಉತ್ತರ ಕೊಟ್ಟಿಲ್ಲ. ಹೀಗಾಗಿ ಉಮೇಶ್ ಜಾಧವ್ ಅವರು ನೀಡಿರುವ ರಾಜೀನಾಮೆ ಅಂಗೀಕಾರ ಮಾಡಬಾರದು. ಎರಡು ವಿಚಾರಗಳನ್ನು ಒಮ್ಮೆಯೇ ವಿಚಾರಣೆ ಮಾಡುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.