– ಒಬ್ಬರನ್ನ ಮುಗಿಸುವ ರಾಜಕೀಯ ಸರಿಯಲ್ಲ
ಬೆಂಗಳೂರು: ದೇವರ ದಯೆಯಿಂದ ಚೆನ್ನಾಗಿದ್ದೇನೆ. ಘಟನೆ ನೋಡಿದಾಗ ನಂಗೆ ಶಾಕ್ ಆಗಿತ್ತು ಎಂದು ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಹೇಳಿದ್ದಾರೆ.
ವಿವೇಕನಗರದಲ್ಲಿ ನಿನ್ನೆ ರಾತ್ರಿ ನಡೆದ ಸ್ಫೋಟದಲ್ಲಿ ಗಾಯಗೊಂಡು ಸೈಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಹ್ಯಾರಿಸ್ ಇಂದು ಮಧ್ಯಾಹ್ನ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸ್ಫೋಟದ ಆ ಸೌಂಡ್ ನನಗೆ ಆಶ್ಚರ್ಯ ಉಂಟುಮಾಡಿತ್ತು. ಪೊಲೀಸರು ಸರಿಯಾದ ತನಿಖೆ ನಡೆಸುತ್ತಾರೆ ಎನ್ನುವ ನಂಬಿಕೆ ಇದೆ. ನಾನು ಚಿಕ್ಕ ವಯಸ್ಸಿನಿಂದ ನೋಡಿದ್ದೇನೆ ಅದು ಪಟಾಕಿ ಅಲ್ಲ. ಅದರಲ್ಲಿ ರೌಂಡ್ ರೀತಿಯ ಬಾಲ್ ಇತ್ತು ಎಂದು ಹೇಳಿದರು.
ನನಗೆ ಯಾರೂ ರಾಜಕೀಯ ವಾಗಿ ಶತ್ರುಗಳಿಲ್ಲ. ತನಿಖೆ ನಡೆಸುವ ಬಗ್ಗೆ ಗೃಹಸಚಿವರು ಬಸವರಾಜ ಬೊಮ್ಮಯಿ ಭರವಸೆ ನೀಡಿದ್ದಾರೆ. ಪದೇ ಪದೇ ಈ ರೀತಿಯ ಘಟನೆಗಳು ನಡೆಯುತ್ತಿವೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕಾಗಿದೆ ಎಂದರು.
ಒಬ್ಬರನ್ನು ಮುಗಿಸುವಂತ ಯಾವುದೇ ರಾಜಕೀಯ ಮಾಡಬಾರದು. ಅಸೂಯೆ ಇರಬೇಕು. ಆದರೆ ಒಬ್ಬರನ್ನು ಕೊಲೆ ಮಾಡುವ ಅಸೂಯೆ ಬೇಡ. ಅವರಿಗೆ ದೇವರು ಒಳ್ಳೆ ಬುದ್ಧಿ ಕೊಡಲಿ ಎಂದು ಹೇಳಿದರು.
ಶಾಸಕ ರಾಮಲಿಂಗ ರೆಡ್ಡಿ ಮಾತನಾಡಿ, ಎನ್.ಎ.ಹ್ಯಾರಿಸ್ ಅವರ ಕಾರ್ಯಕ್ರಮದಲ್ಲಿ ಸ್ಫೋಟಗೊಂಡಿದ್ದು ಪಟಾಕಿ ಅಲ್ಲ. ಅದು ಬಾಂಬ್. ಘಟನಾ ಸ್ಥಳದಲ್ಲಿ ಬುಲೆಟ್ಗೆ ಉಪಯೋಗಿಸುವ ವಸ್ತುಗಳು ಪತ್ತೆಯಾಗಿವೆ. ಪೊಲೀಸರು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.