ನವದೆಹಲಿ: ವಿರೋಧ ಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬವಾದ ಹಿನ್ನೆಲೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ರಾಜ್ಯ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ನಿರ್ಧರಿಸಿರುವ ನಾಯಕರು ಶೀಘ್ರ ನೇಮಕಕ್ಕೆ ಒತ್ತಾಯಿಸಲಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿರೋಧ ಪಕ್ಷದ ಸ್ಥಾನ ಆಕಾಂಕ್ಷಿ ಹೆಚ್.ಕೆ ಪಾಟೀಲ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯ ಗಾಂಧಿ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ. ದೆಹಲಿಯಲ್ಲಿ ಇರುವ ಹೆಚ್.ಕೆ ಪಾಟೀಲ್ ಸೋನಿಯಾ ಗಾಂಧಿ ಸೇರಿ ಹಲವು ವರಿಷ್ಠ ನಾಯಕರ ಭೇಟಿಗೆ ಸಮಯ ಕೇಳಿದ್ದಾರೆ.
ಬೈ ಎಲೆಕ್ಷನ್ ಬಳಿಕ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ, ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಹೈಕಮಾಂಡ್ ಇನ್ನೂ ಅಂಗಿಕರಿಸಿಲ್ಲ. ರಾಜ್ಯಕ್ಕೆ ಸಮಿತಿಯೊಂದು ಬಂದು ಹೊಸ ನಾಯಕರ ಆಯ್ಕೆಗೆ ಅಭಿಪ್ರಾಯ ಕೂಡ ಸಂಗ್ರಹಿಸಿದೆ. ಆದರೆ ಹೈಕಮಾಂಡ್ ಇದುವರೆಗೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಇದರಿಂದ ಪಕ್ಷಕ್ಕೆ ಹಾನಿಯಾಗಲಿದೆ ಎಂದು ಪಾಟೀಲ್ ಹೈಕಮಾಂಡ್ ಮನವರಿಕೆ ಮಾಡಲು ಇಚ್ಛಿಸಿದ್ದಾರೆ.
ಸಿಎಎ ಸೇರಿ ಹಲವು ಜ್ವಲಂತ ವಿಚಾರಗಳಿವೆ. ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಕಾಂಗ್ರೆಸ್ನಲ್ಲಿ ನಾಯಕತ್ವದ ಪ್ರಶ್ನೆ ಹುಟ್ಟಿಕೊಳ್ಳುವುದು ಸರಿಯಲ್ಲ. ಹೈಕಮಾಂಡ್ ಶೀಘ್ರವಾಗಿ ನೇಮಕ ಮಾಡಲು ಹೆಚ್.ಕೆ ಪಾಟೀಲ್ ಒತ್ತಾಯಿಸಲಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿರುವ ಅವರು, ಇಂದು ಹೈಕಮಾಂಡ್ ನಾಯಕರನ್ನು ಭೇಟಿಯಾಗುವೆ. ಕೆಪಿಸಿಸಿ-ವಿಪಕ್ಷ, ಸಿಎಲ್ಪಿ ನಾಯಕನ ಸ್ಥಾನದ ತಡವಾಗಿದೆ. ವಿಳಂಬದಿಂದ ಪಕ್ಷಕ್ಕೆ ಹಾನಿಯುಂಟಾಗುತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಬೇಗ ನಿರ್ಣಯ ಆಗಬೇಕು ಎಂದು ಮನವಿ ಮಾಡಿಕೊಳ್ಳಲಿದ್ದೇನೆ. ಈ ಬಗ್ಗೆ ಕೆ.ಸಿ. ವೇಣುಗೋಪಾಲ್ ಜೊತೆಗೆ ಚರ್ಚಿಸಲಿದ್ದೇನೆ ಎಂದರು.