ದಾವಣಗೆರೆ: ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ವಿಧಾನಸಭಾ ಚುನಾವಣೆಯಲ್ಲಿ ಸೋಲಲು ಕೈ ನಾಯಕರೇ ಕಾರಣ ಎಂದು ದಾವಣಗೆರೆಯ ಜಿಲ್ಲಾಪಂಚಾಯತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಬಸಂತಪ್ಪ ವಾಗ್ದಾಳಿ ನಡೆಸಿದ್ದಾರೆ.
ನಗರದ ರೇಣುಕಾ ಮಂದಿರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎಸ್.ಎಸ್ ಮಲ್ಲಿಕಾರ್ಜುನ್ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸಿದ್ದರು. ಬಡ ಜನರಿಗೆ 10 ಸಾವಿರ ಮನೆಗಳನ್ನು ನೀಡಿದ್ದರು. ಅಲ್ಲದೆ ಪಕ್ಷದ ಮುಖಂಡರಿಗೆ ತಲಾ ನೂರು ಮನೆಗಳನ್ನು ಕೊಟ್ಟು ಬಡವರಿಗೆ ಹಂಚಿ ಎಂದು ಜವಾಬ್ದಾರಿ ವಹಿಸಿದ್ದರು. ಆದರೆ ಮುಖಂಡರು ಮಾತ್ರ ತನ್ನ ಹೆಂಡತಿ ಮಕ್ಕಳು ಹಾಗೂ ಅನೈತಿಕ ಸಂಬಂಧ ಹೊಂದಿರುವವರಿಗೆ ಮನೆಗಳನ್ನು ನೀಡಿದ್ದಾರೆ ಹೊರತು ಬಡವರಿಗೆ ನೀಡಿಲ್ಲ. ಮಲ್ಲಿಕಾರ್ಜುನ್ ಅವರ ಸೋಲಿಗೆ ಪಕ್ಷದ ಮುಖಂಡರೇ ಕಾರಣ ಎಂದು ವೇದಿಕೆ ಮೇಲೆಯೇ ಕಿಡಿಕಾರಿದ್ದಾರೆ.
ಒಂದೆಡೆ ಮಾಜಿ ಸಚಿವರು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಶ್ರಮಿಸುತ್ತಿದ್ದರೆ ಇನ್ನೊಂದೆಡೆ ಅವರ ಜೊತೆಗಿರುವ ಮುಖಂಡರು ಅವರ ಅಭಿವೃದ್ಧಿ ಕೆಲಸಗಳನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದಲೇ ವಿಧಾನಸಭೆ ಚುನಾವಣೆಯಲ್ಲಿ ಅವರು ಸೋಲು ಅನುಭವಿಸುವಂತಾಯಿತು ಎಂದು ಸ್ವ ಪಕ್ಷ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.
ಪಕ್ಷಕ್ಕೆ ಎಲ್ಲಾ ವರ್ಗದ ಜನರು ಮತ ಹಾಕಿದ್ದಾರೆ. ನಾವು ಧರ್ಮದ ಆಧಾರದ ಮೇಲೆ ಕೆಲಸ ಮಾಡುವುದು ಬೇಡ. ಜನರಿಗಾಗಿ ಕೆಲಸ ಮಾಡಬೇಕು. ಅಷ್ಟೇ ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಮಾಯಕೊಂಡ ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳಿಗಿಂತ ಹೆಚ್ಚಿನ ಮತಗಳು ಕಾಂಗ್ರೆಸ್ಗೆ ಬೀಳುವಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv