ಬೆಂಗಳೂರು: ಶಾಸಕರನ್ನು ನೆಗ್ಲೆಕ್ಟ್ ಮಾಡಿದ ಪರಿಣಾಮ ಇಂದು ಈ ಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ನಾಯಕರು ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾನುವಾರ ಕಾಂಗ್ರೆಸ್ – ಜೆಡಿಎಸ್ ನಾಯಕರ ಸಭೆ ನಡೆಯಿತು. ಈ ವೇಳೆ ಕಾಂಗ್ರೆಸ್ ನಾಯಕರು ಸಿಎಂ ಕಾರ್ಯವೈಖರಿ ಬಗ್ಗೆ ಅಸಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಿಎಂ ವಿರುದ್ಧ ಕಾಂಗ್ರೆಸ್ ಚಾರ್ಜ್ ಶೀಟ್ ಕೂಡ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.
ಭಾನುವಾರ ನಡೆದ ಕಾಂಗ್ರೆಸ್ – ಜೆಡಿಎಸ್ ನಾಯಕರ ಸಭೆಯ ಇನ್ ಸೈಡ್ ಎಕ್ಸ್ ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಸಭೆಯಲ್ಲಿ ಕಾಂಗ್ರೆಸ್ ನಾಯಕರು, ಶಾಸಕರನ್ನು ನೆಗ್ಲೆಕ್ಟ್ ಮಾಡಿದ ಪರಿಣಾಮ ಇಂದು ಈ ಸ್ಥಿತಿ ಬಂದಿದೆ. ನೀವು ನಿಮ್ಮ ಶಾಸಕರನ್ನು ಬಿಟ್ಟರೆ ಯಾವ ಶಾಸಕರ ಒಂದು ಕೆಲಸವಾದ್ರೂ ಮಾಡಿಕೊಟ್ಟಿದ್ದೀರಾ ಎಂದು ಸಿಎಂ ಅವರನ್ನು ಪ್ರಶ್ನಿಸಿದ್ದಾರೆ.
ಅಲ್ಲದೆ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟಿರೋದು ಬಿಡಿ. ನಿಮ್ಮ ಮನೆ ಮಗನಂತೆ ಇದ್ದ ಗೋಪಾಲಯ್ಯ ನಿಮ್ಮನ್ನು ಬಿಟ್ಟು ಹೋಗಿದ್ದಾರೆ ಇದರ ಅರ್ಥ ಏನು?. ಇಂದು ಕಾಂಗ್ರೆಸ್ನಿಂದ ಸರ್ಕಾರ ಹೋಗುತ್ತಿದೆ ಎಂದು ಹೇಳುವುದು ಎಷ್ಟು ಸರಿ ಹೇಳಿ. ಎಲ್ಲವನ್ನು ನೀವೇ ಮಾಡಿಕೊಂಡು ಈಗ ಸರ್ಕಾರ ಉಳಿಸಿ ಕೊಡಿ ಎಂದು ಕೇಳಿದ್ರೆ ನಾವು ಏನ್ ಮಾಡೋದು. ಕಾಂಗ್ರೆಸ್ ಹೈಕಮಾಂಡ್ಗೂ ನಿಮ್ಮ ವರ್ತನೆ ಬಗ್ಗೆ ಬೇಸರ ಇದೆ ಎಂದು ಕಾಂಗ್ರೆಸ್ ನಾಯಕರು ಕಿಡಕಾರಿದ್ದಾರೆ.
ಬೇಸರಗೊಂಡಿರುವ ಶಾಸಕರನ್ನು ಅದ್ಯಾವ ವಿಶ್ವಾಸದಲ್ಲಿ ಮನವೊಲಿಕೆ ಮಾಡುವುದಕ್ಕೆ ಆಗುತ್ತದೆ ಎಂದು ಕಾಂಗ್ರೆಸ್ ನಾಯಕರು ಸಿಎಂ ಅವರನ್ನು ಪ್ರಶ್ನಿಸಿದರು. ಕಾಂಗ್ರೆಸ್ ನಾಯಕರ ಮಾತಿಗೆ ಸಿಎಂ ಮೌನವಾಗಿಯೇ ಇದ್ದರು. ಬಳಿಕ ಮುಂದೆ ಎಲ್ಲ ಸರಿಪಡಿಸಿಕೊಳ್ಳುತ್ತೇನೆ. ಈ ಬಾರಿ ಸರ್ಕಾರ ಉಳಿಸಿ ಎಂದು ಸಿಎಂ ಹೇಳಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕರು ನೋಡೋಣಾ ಪ್ರಯತ್ನ ಮಾಡುತ್ತೀವಿ ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.