ಬೆಂಗಳೂರು: ಸದಾ ಒಂದಿಲ್ಲೊಂದು ವಿವಾದಕ್ಕೆ ಗುರಿಯಾಗುವ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಈ ಬಾರಿ ನವಸಂಕಲ್ಪ ಶಿಬಿರದಲ್ಲಿ ಹೊಸ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಪ್ರವೀಣ್ ಪೀಟರ್ಗೆ ಬೆದರಿಕೆ ಹಾಕಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ಸಂಕಲ್ಪ ಶಿಬಿರದಲ್ಲಿ ಕೃಷ್ಣ ಬೈರೇಗೌಡರ ಸಮಿತಿ ಯುವಕರನ್ನು ಪಕ್ಷದತ್ತ ಸೆಳೆಯುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಪೀಟರ್ ಮಾತಾಡಿ, ಯುವಕರನ್ನು ಸೆಳೆಯಲು ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಒಳ್ಳೆಯ ಇಮೇಜ್ ಇರಬೇಕು ಅಂತವರಿದ್ದರೆ ಸೆಳೆಯುವುದು ಸುಲಭ ಅಂತ ಹೇಳಿದ್ದಾರೆ. ಇದನ್ನೂ ಓದಿ: ಬೇಲ್ನಲ್ಲಿರುವ ಶಾಸಕರ ಪುತ್ರ ನನ್ನ ಪ್ರಾಮಾಣಿಕತೆ ಪ್ರಶ್ನಿಸುತ್ತಿದ್ದಾರೆ: ನಲಪಾಡ್ಗೆ ರಮ್ಯಾ ತಿರುಗೇಟು
ಈ ಹೇಳಿಕೆಯಿಂದ ಕೆರಳಿ ಕೆಂಡವಾದ ನಲಪಾಡ್ ಇದು ನನ್ನನ್ನೇ ಗುರಿಯಾಗಿಸಿ ಹೇಳುತ್ತಿರುವುದು ಎಂದು ಅಸಮಾಧಾನ ಹೊರಹಾಕಿದ್ದಾರೆ. ಗುರಾಯಿಸುವುದು, ಬೆದರಿಕೆ ಹಾಕುವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಪೀಟರ್ ದೂರಿದ್ದಾರೆ.
ಶಿಬಿರ ಮುಗಿದ ಮೇಲೆ ಮೊಬೈಲ್ಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಇದು ನಲಪಾಡ್ ಕಡೆಯವರದ್ದೇ ಕರೆ ಅಂತ ಪೀಟರ್ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸ್ವತಃ ಪ್ರವೀಣ್ ಪೀಟರ್ ಅವರೇ ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿ ನಲಪಾಡ್ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ನಲಪಾಡ್ ಬಳಿ ಕೇಳಿದಾಗ, ನನಗೂ ಅವರಿಗೂ ಏನೂ ಎಲ್ಲ. ನಾನು ಪ್ರತಿಕ್ರಿಯಿಸಲ್ಲ ಎಂದು ಕೈ ಮುಗಿದಿದ್ದಾರೆ.