ಮಂಡ್ಯ: ಬಿಜೆಪಿ ಮುಖಂಡ ಅನಂತಕುಮಾರ್ ಹೆಗ್ಡೆಯನ್ನು ನಾಯಿಬಾಲಕ್ಕೆ ಹೋಲಿಸಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ.
ಮಂಡ್ಯದ ಮಳವಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನರೇಂದ್ರಸ್ವಾಮಿ ಪರ ಪ್ರಚಾರ ಭಾಷಣ ಮಾಡುತ್ತಾ, ಪ್ರಧಾನಿ ನರೇಂದ್ರಮೋದಿ ಮತ್ತು ಬಿಜೆಪಿ ಮುಖಂಡರ ವಿರುದ್ಧ ಏಕವಚನದಲ್ಲಿಯೇ ತಮ್ಮ ಆಕ್ರೋಶ ಹೊರಹಾಕಿದ್ರು.
ಮೋದಿ ಒಬ್ಬ ಸುಳ್ಳಿನ ಸರದಾರ. ಬಿಜೆಪಿ ಮುಖಂಡರು, ಮಂತ್ರಿಗಳು ನಾವು ಆರಿಸಿ ಬಂದಿದ್ದು ಸಂವಿಧಾನ ಬದಲಾಯಿಸಲು ಅಂತಾರೆ. ಅಂನಂತಕುಮಾರ್ ಹೆಗ್ಡೆ ಅವನು ಬಾಯಿ ತೆರೆದ್ರೆ ಸಂವಿಧಾನದ ವಿರುದ್ಧ ಹೋರಾಟ ಮಾಡುತ್ತಾನೆ. ಈ ಬಗ್ಗೆ ಪಾರ್ಲಿಮೆಂಟ್ ನಲ್ಲಿ ಕ್ಷಮೆ ಕೇಳಿಸಿದ್ದೆವು. ಆದ್ರೆ ನಾಯಿ ಬಾಲ ಡೊಂಕೇ. ಎಲ್ಲಿ ಹೋದ್ರು ಅದನ್ನೆ ಮಾತನಾಡ್ತಾನೆ ಈಗ ಸ್ವಲ್ಪ ಬಿಟ್ಟಿದ್ದಾನೆ ಎಂದು ಕಿಡಿಕಾರಿದ್ರು.
ಇದೇ ವೇಳೆ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿ, ಮೋದಿಯವರು ಬಂದಾಗ ನನ್ನ ಮೇಲೆ ಬಹಳ ಅನುಕಂಪ ತೋರಿಸಿದ್ರು. ಆದ್ರೆ ಇದು ರಾಜಕೀಯವಾದ ಮಾತು. ಅವರಿಗೆ ನಿಜವಾಗಿ ಪ್ರೀತಿ ಇದ್ದಿದ್ರೆ, ಪ್ರೀತಿ ಬೇಡ. ಯಾಕಂದ್ರೆ ಅವರು ಪ್ರೀತಿ ಮಾಡೋದು ಬಹಳ ಡೇಂಜರ್. ಮೋದಿಗೆ ದಲಿತರ ಬಗೆಗೆ ನಿಜವಾಗಲೂ ಕಾಳಜಿ ಇದ್ದಿದ್ದರೆ ನನ್ನನ್ನು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನಾಗಿ ಮಾಡುತ್ತಿದ್ದರು ಅಂದ್ರು.
ನಮ್ಮ ಪಕ್ಷದಲ್ಲಿ 48 ಜನ ಸಂಸದರಿದ್ದೇವೆ. ನಮ್ಮ ಪಕ್ಷಕ್ಕೆ ವಿರೋಧ ಪಕ್ಷದ ಸ್ಥಾನ ಮಾನ ನೀಡಿದ್ದರೆ ನನಗೂ ಸರ್ಕಾರಿ ಸೌಲಭ್ಯ ಸಿಗುತ್ತಿತ್ತು. ಸಚಿವ ಸ್ಥಾನಮಾನದ ಗೌರವ ಸಿಗುತ್ತಿತ್ತು. ಇದಕ್ಕೇನು ಕಾನೂನು ಬೇಕಿಲ್ಲ, ಸಂವಿಧಾನ ತಿದ್ದುಪಡಿ ಬೇಡ. ಆದರೆ ಇಚ್ಛಾಶಕ್ತಿ ಬೇಕು ಎಂದು ಮೋದಿ ವಿರುದ್ಧ ಖರ್ಗೆ ಆಕ್ರೋಶ ಹೊರಹಾಕಿದ್ರು.