ನವದೆಹಲಿ: ಲೋಕಸಭೆಯಲ್ಲಿ ಬಲ ಪ್ರದರ್ಶನ ತೋರಿಸಲು ಹೋಗಿ ಕಾಂಗ್ರೆಸ್ ದೇಶದ ಮುಂದೆ ಬೆತ್ತಲಾಗಿದೆ ಎಂದು ಸಂಸದೆ ಶೋಭ ಕರಂದ್ಲಾಜೆ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಅವಿಶ್ವಾಸ ನಿಲುವಳಿ ಮಂಡಳಿ ವಿಚಾರ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವ ಅಣಕ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಮಾಡ್ತಿವೆ. ಇವರ ಅವಿಶ್ವಾಸ ನಿಲುವಳಿಗೆ ಯಾವುದೇ ಬೆಲೆ ಇಲ್ಲ ಅಂದ್ರು.
ಅವಿಶ್ವಾಸ ನಿಲುವಳಿ ಮಂಡನೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರು ಮತ್ತಷ್ಟು ಗಟ್ಟಿಯಾಗಲಿದ್ದಾರೆ. ಕಾಂಗ್ರೆಸ್ ಗೆ ಅವಿಶ್ವಾಸ ಇದೆ. ಆದರೆ ದೇಶದ ನಾಗರೀಕರಿಗಿಲ್ಲ. ಮೋದಿ ನೇತೃತ್ವದ ಸರ್ಕಾರದಿಂದಾಗಿ ಭಾರತಕ್ಕೆ ವಿದೇಶದಲ್ಲಿ ಗೌರವ, ಮನ್ನಣೆ ಸಿಗುತ್ತಿದೆ. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಕಡಿಮೆ ಆಗಿವೆ ಎಂದು ಹೇಳಿದರು.
ಇಂದು ನಮ್ಮ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಅಲ್ಲದೇ ಜಿಡಿಪಿ ದರವು ಹೆಚ್ಚಾಗುತ್ತಿರುವ ಕಾರಣದಿಂದ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಅವಿಶ್ವಾಸ ನಿಲುವಳಿ ಮಂಡಳಿಯ ದಾಳವನ್ನು ಬೀಸಿದೆ. ಆದರೆ ಈ ಮೊದಲು ವಾಜಪೇಯಿ ಸರ್ಕಾರ ವೇಳೆ ನಮ್ಮ ಬಳಿ ಸಂಖ್ಯೆ ಇರಲಿಲ್ಲ. ಇಂದು ಬಿಜೆಪಿ ಸ್ವಂತ ಬಲದಲ್ಲಿ ಸರ್ಕಾರ ರಚಿಸಿದೆ. ಸರ್ಕಾರಕ್ಕೆ ಎನ್ಡಿಎ ಒಕ್ಕೂಟದ ಪಕ್ಷಗಳ ಬೆಂಬಲ ನೀಡಲಿವೆ ಎಂದು ತಿಳಿಸಿದ್ದಾರೆ.