ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣದಲ್ಲಿ (Valmiki Corporation Corruption Case) ಮಾಜಿ ಸಚಿವ ನಾಗೇಂದ್ರ (BN Nagendra) ಅವರನ್ನು ಶುಕ್ರವಾರ ಜಾರಿ ನಿರ್ದೇಶನಾಲಯ ಬಂಧಿಸಿದೆ.
ಹಗರಣ ಕೇಸ್ ಸಂಬಂಧ ಜಾರಿ ನಿರ್ದೇಶನಾಲಯದ (ED) ನಾಲ್ವರು ಅಧಿಕಾರಿಗಳ ತಂಡ ಶುಕ್ರವಾರ ವಿಚಾರಣೆಗೆ ನಾಗೇಂದ್ರ ಅವರ ಮನೆಗೆ ಆಗಮಿಸಿತ್ತು. ಬಳಿಕ ಮಾಜಿ ಸಚಿವರನ್ನ ವಶಕ್ಕೆ ಪಡೆದಿದ್ದ ಅಧಿಕಾರಿಗಳು ಸತತ ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಶಾಂತಿನಗರ ಇಡಿ ಕಚೇರಿಗೆ ಕರೆತಂದಿದ್ದರು.
ಮಹತ್ವದ ದಾಖಲೆಗಳ ಸಂಗ್ರಹ:
ಬುಧವಾರವಷ್ಟೇ ಮಾಜಿ ಸಚಿವ ಬಿ.ಎನ್ ನಾಗೇಂದ್ರ, ದದ್ದಲ್ (BasanaGouda Daddal) ಅವರ ಆಪ್ತರು ಹಾಗೂ ಇತರ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನ ಕಲೆಹಾಕಿತ್ತು. 2ನೇ ದಿನವಾದ ಗುರುವಾರವೂ ದಾಳಿ ಮುಂದುವರಿದಿತ್ತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಂಗಳೂರು, ಬಳ್ಳಾರಿ, ರಾಯಚೂರು ಸೇರಿ ವಿವಿಧೆಡೆ ಶೋಧ ನಡೆಸಿದ್ದರು. ಬಳಿಕ ಮಾಜಿ ಮಂತ್ರಿ ನಾಗೇಂದ್ರ, ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮತ್ತು ಅವರ ಆಪ್ತರನ್ನು ಅವರವರ ಮನೆಗಳಲ್ಲೇ ಅಗತ್ಯ ದಾಖಲೆಗಳನ್ನು ಮುಂದಿಟ್ಟುಕೊಂಡು ವಿಚಾರಣೆಗೆ ಒಳಪಡಿಸಿದ್ದರು.
ಬಳ್ಳಾರಿಯಲ್ಲಿ ಇಡಿ ವಿಚಾರಣೆಗೆ ಅಸಹಾಕಾರ ತೋರಿದ್ದ ಹಿನ್ನೆಲೆಯಲ್ಲಿ ನಾಗೇಂದ್ರ ಪಿಎ ವಿಜಯ್ ಸೇರಿ ನಾಲ್ವರಿಗೆ ಇಡಿ ನೊಟೀಸ್ ಕೊಟ್ಟಿತ್ತು. ಬೆಂಗಳೂರಿಗೆ ಬಂದು ವಿಚಾರಣೆ ಎದುರಿಸಿ ಎಂದು ಸೂಚಿಸಿದೆ. ಈ ಎಲ್ಲ ಬೆಳವಣಿಗೆ ನಡುವೆಯೇ ನಾಗೇಂದ್ರ ಅವರನ್ನು ಇಡಿ ಬಂಧಿಸಿದೆ.