ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ಕಾಂಗ್ರೆಸ್ ತನ್ನ 3ನೇ ಪಟ್ಟಿಯನ್ನು (Congress Candidates List) ಶನಿವಾರ ಬಿಡುಗಡೆ ಮಾಡಿದೆ.
ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದ ಕಾಂಗ್ರೆಸ್, 2ನೇ ಪಟ್ಟಿಯಲ್ಲಿ 42 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿತ್ತು. ಶನಿವಾರ 3ನೇ ಪಟ್ಟಿ ಪ್ರಕಟಿಸಿದ್ದು, 43 ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಿದ್ದು, ಇನ್ನೂ 15 ಕ್ಷೇತ್ರಗಳನ್ನ ಬಾಕಿ ಉಳಿಸಿಕೊಂಡಿದೆ.
ಕೋಲಾರದಿಂದ (Kolara Constituency) ಸಿದ್ಧರಾಮಯ್ಯಗೆ (Siddaramaiah) ಟಿಕೆಟ್ ನಿರಾಕರಿಸಲಾಗಿದ್ದು ವರುಣಾ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಮಾಡಲಿದ್ದಾರೆ. ಅಥಣಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ಗೆ ಹಾರಿದ ಲಕ್ಷ್ಮಣ ಸವದಿಗೆ ಟಿಕೆಟ್ ನೀಡಲಾಗಿದೆ. ತೇರದಾಳ ಕ್ಷೇತ್ರದಿಂದ ಟಿಕೆಟ್ ನಿರೀಕ್ಷಿಸಿದ್ದ ನಟಿ ಉಮಾಶ್ರೀಗೆ ನಿರಾಸೆಯಾಗಿದ್ದು, ತೆರದಾಳದಿಂದ ಸಿದ್ಧಪ್ಪ ರಾಮಪ್ಪ ಕೊಣ್ಣೂರುಗೆ ಟಿಕೆಟ್ ಸಿಕ್ಕಿದೆ.
ಮದ್ದೂರಿನಲ್ಲಿ ಕೆ.ಎಂ ಉದಯ್ ಅವರಿಗೆ ನೀಡಲಾಗಿದೆ. ತರಿಕೇರೆಯಲ್ಲಿ ಜಿ.ಎಚ್ ಶ್ರೀನಿವಾಸ್ಗೆ ಟಿಕೆಟ್ ನೀಡಲಾಗಿದೆ. ಭಾರೀ ಬಂಡಾಯದ ನಡುವೆಯೂ ಮಾಜಿ ರಾಜ್ಯಪಾಲರಾದ ಮಾರ್ಗೆರೇಟ್ ಆಳ್ವಾ ಅವರ ಪುತ್ರ ನಿವೇದಿತಾ ಆಳ್ವಾಗೆ ಕುಮಟಾದಿಂದ ಟಿಕೆಟ್ ನೀಡಿದೆ. ಬೊಮ್ಮನಹಳ್ಳಿ ಕ್ಷೇತ್ರದಿಂದ ನಿರ್ಮಾಪಕ ಶ್ರೀನಿವಾಸ್ ಗೌಡಗೆ ಟಿಕೆಟ್ ನೀಡಲಾಗಿದೆ.
ದೇವರಹಿಪ್ಪರಗಿಯಲ್ಲಿ ಶರಣಪ್ಪ ಸುಣಗಾರ್ಗೆ, ಸಿಂಧನೂರಿನಲ್ಲಿ ಹಂಪನಗೌಡ ಬಾರ್ದಲಿ ಹಾಗೂ ಬಳ್ಳಾರಿಯಲ್ಲಿ ನಾರಾ ಭರತ್ ರೆಡ್ಡಿಗೆ ಟಿಕೆಟ್ ನೀಡಿದ್ದಾರೆ. ಆದ್ರೆ ಬಳ್ಳಾರಿಯಲ್ಲಿ ಬೆಂಬಲಿಗ ಆಂಜನೇಯಲುಗೆ ಟಿಕೆಟ್ ಕೊಡಿಸುವಲ್ಲಿ ಡಿ.ಕೆ ಶಿವಕುಮಾರ್ ವಿಫಲರಾಗಿದ್ದಾರೆ.
ಬಾಕಿ ಇರಿಸಿಕೊಂಡಿದ್ದ 58 ಕ್ಷೇತ್ರಗಳ ಪೈಕಿ 43 ಕ್ಷೇತ್ರಗಳಿಗೆ 3ನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗಿದ್ದು, ಇನ್ನೂ 15 ಕ್ಷೇತ್ರಗಳನ್ನ ಬಾಕಿ ಇರಿಸಿಕೊಂಡಿದೆ.