-ತಾಲಿಬಾನ್ ಸಂಸ್ಕೃತಿ ಕಾಂಗ್ರೆಸ್ನವರದ್ದು
-ಪ್ರಧಾನಿಗಳು ತೈಲ ದರದ ಆದಾಯ ಮನೆಗೆ ಕೊಂಡೊಯ್ಯಲ್ಲ
ಬೆಂಗಳೂರು: ಸಂಘ ಪರಿವಾರದ ವಿರುದ್ಧ ಟೀಕಿಸುವ ನೈತಿಕ ಹಕ್ಕು ಯಾರಿಗೂ ಇಲ್ಲ. ಸಂಘ ಪರಿವಾರದ ನಾಯಕರಿಗೆ ಕುರ್ಚಿ ವ್ಯಾಮೋಹ ಇಲ್ಲ. ದೇಶಕ್ಕಾಗಿ ತ್ಯಾಗ ಮಾಡುವ ಸಂಸ್ಥೆ ಆರ್ಎಸ್ಎಸ್. ಕುರ್ಚಿ ವ್ಯಾಮೋಹ ಇರೋದು ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ. ಆರ್ಎಸ್ಎಸ್ ವಿರುದ್ಧ ಮಾತಾಡಿದರೆ ಕಾಂಗ್ರೆಸ್ ನಿರ್ನಾಮ ಆಗುತ್ತದೆ ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೇಣುಕಾಚಾರ್ಯ, ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಇಂಥ ಹೇಳಿಕೆಗಳನ್ನು ಕಾಂಗ್ರೆಸ್, ಜೆಡಿಎಸ್ ಪಕ್ಷದ ನಾಯಕರು ಕೊಡುತ್ತಿದ್ದಾರೆ. ಇವರ ನಾಟಕ ಅಲ್ಪಸಂಖ್ಯಾತರಿಗೂ ಗೊತ್ತಾಗಿ ಹೋಗಿದೆ. ಉಪಚುನಾವಣೆ ಬಂದಿರುವ ಹಿನ್ನೆಲೆಯಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಕಾಂಗ್ರೆಸ್ ಎರಡು ಚುನಾವಣೆಗಳಲ್ಲೂ ಧೂಳೀಪಟ ಆಗುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: RSS ಅನ್ನೋದು ಕೋಮುವಾದಿ ಸಂಘಟನೆ: ಸಿದ್ದರಾಮಯ್ಯ
ಆರ್ಎಸ್ಎಸ್ ಬಗ್ಗೆ ಅನಗತ್ಯವಾಗಿ ಟೀಕೆ ಮಾಡುವುದು ಸರಿಯಲ್ಲ. ತಾಲಿಬಾನ್ ಸಂಸ್ಕೃತಿ ಆರ್ಎಸ್ಎಸ್ನದ್ದಲ್ಲ. ತಾಲಿಬಾನ್ ಸಂಸ್ಕೃತಿ ಕಾಂಗ್ರೆಸ್ನವರದ್ದು. ಕೊಳ್ಳಿಯಿಡುವ ಸಂಸ್ಕೃತಿ ಕಾಂಗ್ರೆಸ್ ನವರದ್ದು ವಿಕೃತ ಮನಸ್ಸಿನವರು ನೀವು. ವೋಟಿಗಾಗಿ ರಾಜಕಾರಣ ಮಾಡಬೇಡಿ. ಹಿಂದೂತ್ವ, ಸಮಾಜ, ದೇಶ ಸೇವೆ ಮಾಡುವ ಸಂಸ್ಥೆ ಆರ್ಎಸ್ಎಸ್. ಅರ್ಪಣಾ ಮನೋಭಾವದೊಂದಿಗೆ ಎಲ್ಲರನ್ನೂ ಮಾರ್ಗದರ್ಶನ ಮಾಡುವ ಸಂಸ್ಥೆ ಆರ್ಎಸ್ಎಸ್ ಎಂದರು. ಇದನ್ನೂ ಓದಿ: RSS ಹುಟ್ಟಿದಾಗಿಂದ್ಲೂ ಏನೆಲ್ಲ ಮಾಡ್ಕೊಂಡು ಬಂದಿದೆ ಅನ್ನೋದು ಜಗತ್ತಿಗೆ ಗೊತ್ತಿದೆ: ಎಚ್ಡಿಕೆ
ತೈಲ ದರ ಏರಿಕೆ ಕುರಿತು ಮಾತನಾಡಿ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಾಗಿದೆ ಹಾಗಾಗಿ ಬೆಲೆ ಏರಿಕೆ ಸಹಜ. ಉತ್ಪಾದಕರಿಂದಲೂ ದರ ಏರಿಕೆ ಆಗಿದೆ. ಸಹಜವಾಗಿ ತೈಲ ದರದ ಜೊತೆಗೆ ಉತ್ಪನ್ನಗಳ ಮಾರುಕಟ್ಟೆ ದರ ಹೆಚ್ಚಾಗುತ್ತದೆ. ಪ್ರಧಾನಿಗಳು ತೈಲ ದರದ ಆದಾಯ ಮನೆಗೆ ಕೊಂಡೊಯ್ಯಲ್ಲ. ಆ ಹಣದಿಂದ ದೇಶದ ಅಭಿವೃದ್ಧಿಗೆ ಬಳಸಲಾಗುತ್ತದೆ. ಎಂದು ದರ ಏರಿಕೆಗೆ ರೇಣುಕಾಚಾರ್ಯ ಸಮರ್ಥನೆ ನೀಡಿದರು.
ಯಡಿಯೂರಪ್ಪ ಕಂಟ್ರೋಲ್ ಮಾಡಲು ಉಮೇಶ್ ಮೇಲೆ ಐಟಿ ದಾಳಿ ಎಂಬ ಆರೋಪ ವಿಚಾರವಾಗಿ ಮಾತನಾಡಿ, ಬಿಜೆಪಿ ಯಡಿಯೂರಪ್ಪಗೆ ಎಲ್ಲ ಸ್ಥಾನಮಾನ ಕೊಟ್ಟಿದೆ. ಯಡಿಯೂರಪ್ಪರನ್ನು ಹದ್ದುಬಸ್ತಿನಲ್ಲಿಡಲು ದಾಳಿ ಆಗಿದೆ ಅನ್ನೋದು ಸುಳ್ಳು. ಖುದ್ದು ನಿನ್ನೆ ಯಡಿಯೂರಪ್ಪ ದಾಳಿಗೂ ಚುನಾವಣೆಗೂ ಸಂಬಂಧ ಇಲ್ಲ ಅಂತ ಅವರೇ ಹೇಳಿದ್ದಾರೆ. ಐಟಿ ದಾಳಿಗೆ ಯಡಿಯೂರಪ್ಪ, ವಿಜಯೇಂದ್ರ ಅವರನ್ನು ತಳುಕು ಹಾಕುವುದು ಸರಿಯಲ್ಲ. ಯಡಿಯೂರಪ್ಪ ಬಗ್ಗೆ ಪಕ್ಷಕ್ಕೆ ಅಪಾರ ಗೌರವ, ಅಭಿಮಾನ ಇದೆ. ಅವರನ್ನು ಪಕ್ಷ ಸೈಡ್ ಲೈನ್ ಮಾಡಿಲ್ಲ. ಯಡಿಯೂರಪ್ಪ ಆಪ್ತ ಆಗಿದ್ರೆ ಯಡಿಯೂರಪ್ಪನವರ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದಿಢೀರ್ ಆರ್ಎಸ್ಎಸ್ ವಿರುದ್ಧ ಎಚ್ಡಿಕೆ ಮುಗಿಬಿದ್ದಿದ್ದು ಯಾಕೆ?