– ಜೆಡಿಎಸ್ಗೆ ಯಾವಾಗಲೂ ಕಾಂಗ್ರೆಸ್ ಟಾರ್ಗೆಟ್
– ರಾಜ್ಯ ರಾಜಕಾರಣ ಬಗ್ಗೆ ಚರ್ಚಿಸಲು ದೆಹಲಿ ಭೇಟಿ
ಹುಬ್ಬಳ್ಳಿ: RSS ಅನ್ನೋದು ಕೋಮುವಾದಿ ಸಂಘಟನೆಯಾಗಿದೆ. ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುವುದು ಹಾಗೂ ಹಿಂದೂಗಳನ್ನ ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವುದಂತದ್ದು RSS ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ಮುಂದುವರಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ RSS ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಅವರು ಪ್ರತಿಕ್ರಿಯಸಿದರು. ಸಮಾಜದಲ್ಲಿ ಅಶಾಂತಿಯನ್ನ ನಿರ್ಮಾಣ ಮಾಡುವ ಕೆಲಸವನ್ನ ಮೊದಲಿನಿಂದಲೂ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅದರಲ್ಲಿ ಯಾವುದೇ ನಂಬಿಕೆ ಇಟ್ಟುಕೊಂಡಿಲ್ಲ. ಎಲ್ಲ ಧರ್ಮದವರನ್ನ ನಾವು ಗೌರವಿಸುತ್ತೇವೆ. RSSನ ಮುಖವಾಡವೇ ಬಿಜೆಪಿ. RSS ನವರು ಏನು ನಿರ್ದೇಶನ ಕೊಡ್ತಾರೆ ಅದನ್ನ ಬಿಜೆಪಿ ಮಾಡುತ್ತೆ ಎಂದು ಕಿಡಿಕಾರಿದರು. ಇದನ್ನೂ ಓದಿ: ದಿಢೀರ್ ಆರ್ಎಸ್ಎಸ್ ವಿರುದ್ಧ ಎಚ್ಡಿಕೆ ಮುಗಿಬಿದ್ದಿದ್ದು ಯಾಕೆ?
ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಗಳ ಸ್ಪರ್ಧೆ ವಿಚಾರದ ಬಗ್ಗೆ ಮಾತನಾಡಿ, ಜೆಡಿಎಸ್ ಗೆ ಯಾವಾಗಲೂ ಕಾಂಗ್ರೆಸ್ ಟಾರ್ಗೆಟ್. ಬಸವಕಲ್ಯಾಣದಲ್ಲೂ ಇದೇ ತರ ಮಾಡಿದ್ದಾರೆ, ಹಾನಗಲ್ ಹಾಗೂ ಸಿಂದಗಿಯಲ್ಲಿ ಇದೇ ರೀತಿ ಮಾಡಿದ್ದಾರೆ. ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನ ಹಾಕುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಎಲ್ಲಿ ಕಣಕ್ಕಿಳಿಸಬೇಕೋ ಅಲ್ಲಿ ನಿಲ್ಲಿಸಿಲ್ಲ. ಮಂಡ್ಯ, ಹಾಸನ ಮತ್ತಿತರ ಕಡೆಗಳಲ್ಲಿ ಅಲ್ಪಸಂಖ್ಯಾತರ ಅಭ್ಯರ್ಥಿಗಳನ್ನ ಹಾಕಲಿ. ಇಲ್ಲಿ ಬಿಜೆಪಿಗೆ ಸಹಾಯವಾಗಲಿ ಅಂತಾ ಅಲ್ಪಸಂಖ್ಯಾತರನ್ನ ಕಣ್ಣಕ್ಕಿಳಿಸಿದ್ದಾರೆ ಎಂದರು.
ಜೆಡಿಎಸ್ ಹಾಗೂ ಬಿಜೆಪಿ ಒಳೊಪ್ಪಂದ ಮಾಡಿಕೊಂಡಿದಿಯೋ ಗೊತ್ತಿಲ್ಲ. ಹಳೇ ಮೈಸೂರು ಭಾಗದಲ್ಲಿ ಅಷ್ಟೇ ಅವರ ಪ್ರಾಬಲ್ಯ. ಅಲ್ಲಿ ಕಾಂಗ್ರೆಸ್ ಪಕ್ಷವೂ ಸಹ ಪ್ರಬಲವಾಗಿದೆ. ಹೀಗಾಗಿ ಪದೇ ಪದೇ ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ ಅವರು ಬಿಜೆಪಿಯನ್ನ ಟಾರ್ಗೆಟ್ ಮಾಡುತ್ತಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: RSS ಹುಟ್ಟಿದಾಗಿಂದ್ಲೂ ಏನೆಲ್ಲ ಮಾಡ್ಕೊಂಡು ಬಂದಿದೆ ಅನ್ನೋದು ಜಗತ್ತಿಗೆ ಗೊತ್ತಿದೆ: ಎಚ್ಡಿಕೆ
ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ದಿನೇ ದಿನೇ ಬೆಲೆ ಏರಿಕೆ ಗಗನಕ್ಕೇರುತ್ತಿವೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಹೊಣೆ. ರಾಜ್ಯ ಸರ್ಕಾರ ಇಲ್ಲಿ ತಮಟೆ ಹೊಡೆದುಕೊಂಡು ಕುಳಿತಿದ್ದಾರೆ ಎಂದರು. ಇದೇ ವೇಳೆ ಸೋನಿಯಾಗಾಂಧಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯ ರಾಜಕಾರಣ ಬಗ್ಗೆ ಚರ್ಚಿಸಲು ಭೇಟಿಯಾಗಿದ್ದೆ. ಅಲ್ಲಿ ರಾಷ್ಟ್ರ ರಾಜಕಾರಣದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಸೋನಿಯಾ ಗಾಂಧಿ ರಾಷ್ಟ್ರ ರಾಜಕಾರಣಕ್ಕೆ ಕರೆದೂ ಇಲ್ಲ. ಆ ಬಗ್ಗೆ ಯಾವುದೇ ಚರ್ಚೆನೂ ಮಾಡಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.