ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿದ್ದು, ದಿನೇ ದಿನೇ ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ಇತ್ತ ಬಳ್ಳಾರಿ ಜಿಲ್ಲೆಯ ವಿಜಯನಗರ ಶಾಸಕ ಆನಂದ್ ಸಿಂಗ್ ನಾಪತ್ತೆಯಾಗಿದ್ದು, ಈಗ ಅವರ ಪತ್ತೆಗಾಗಿ ಕಾಂಗ್ರೆಸ್ ಶಾಸಕರು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
ಆನಂದ್ ಸಿಂಗ್ ಬುಧವಾರ ಬಳ್ಳಾರಿಯಿಂದ ರೆಸಾರ್ಟ್ ರಾಜಕಾರಣಕ್ಕೆಂದು ಹೊರಟ್ಟಿದ್ದರು. ಆದರೆ ಇದೂವರೆಗೂ ಬೆಂಗಳೂರು ತಲುಪಿಲ್ಲ. ಕಾಂಗ್ರೆಸ್ ಮುಖಂಡರಿಗೆ ಖುದ್ದು ಕರೆ ಮಾಡಿ ಬೆಂಗಳೂರಿಗೆ ಬರುತ್ತೀದ್ದೀನಿ ಅಂತ ಹೇಳಿದ್ದರು. ಆದರೆ ಅವರು ಕಾಂಗ್ರೆಸ್ ಮುಖಂಡರ ಕೈಗೆ ಸಿಕ್ಕಿಲ್ಲ. ಹೀಗಾಗಿ ಆನಂದ್ ಸಿಂಗ್ ಹುಡುಕಿಕೊಡುವಂತೆ ಇಂದು ಹೊಸಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಜೊತೆಗೆ ಹೊಸಪೇಟೆ ಪೊಲೀಸ್ ಠಾಣೆಗೆ ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟು ಹುಡುಕಿಕೊಡಿ ಎಂದು ಮನವಿ ಸಲ್ಲಿಸಲಿದ್ದಾರೆ.
ಅತ್ತ ರಾಯಚೂರಿನ ಮಸ್ಕಿಯಲ್ಲಿಯೂ ಶಾಸಕ ಪ್ರತಾಪ್ ಗೌಡರನ್ನು ಹುಡುಕಿಕೊಡಿ ಎಂದು ಅಭಿಯಾನ ನಡೆಯಲಿದೆ. ಪ್ರತಾಪ್ ಗೌಡ, ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಬಾರದಿದ್ದರೆ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಸ್ಥಳೀಯ ಕಾಂಗ್ರೆಸ್ಸಿಗರು ಎಚ್ಚರಿಸಿದ್ದಾರೆ.
ಸದ್ಯಕ್ಕೆ ಹೊಸಪೇಟೆ ಶಾಸಕ ಆನಂದ್ ಸಿಂಗ್ ಮತ್ತು ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಇನ್ನೂ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಕ್ಕಿಲ್ಲ. ಇಬ್ಬರನ್ನು ಬಿಜೆಪಿ ಹೈಜಾಕ್ ಮಾಡಿರೋ ಶಂಕೆಯನ್ನು ಕಾಂಗ್ರೆಸ್ ಪಾಳಯ ವ್ಯಕ್ತಪಡಿಸುತ್ತಿದೆ.
ಒಟ್ಟಿನಲ್ಲಿ ಬಳ್ಳಾರಿಯಿಂದ 3 ಶಾಸಕರು ಒಟ್ಟಾಗಿದ್ದು, ಆನಂದ್ ಸಿಂಗ್ ಅವರು ಸಚಿವ ಸ್ಥಾನದ ಬೇಡಿಕೆಯಿಟ್ಟಿದ್ದರು. ಅವರ ಬೇಡಿಕೆ ಈಡೇರಿಸುತ್ತೇವೆ ಅಂತ ಹೇಳಿದ್ರೂ ಕೂಡ ಖಚಿತ ಸ್ಪಷ್ಟತೆ ಇಲ್ಲದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಅವರು ದೂರ ಉಳಿದಿರಬಹುದೆಂಬ ಮಾತುಗಳು ಕಾಂಗ್ರೆಸ್ ವಲಯದಿಂದ ಕೇಳಿಬರುತ್ತಿದೆ.