ಮುಂಬೈ: ಇಂಡಿಯಾಸ್ ಗಾಟ್ ಲೇಟೆಂಟ್ (India’s Got Latent) ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಅಶ್ಲೀಲತೆಯನ್ನು ಪ್ರಸಾರ ಮಾಡಿದ್ದಕ್ಕಾಗಿ ಸಂಘಟಕರು, ಕಲಾವಿದರ ವಿರುದ್ಧ ಮುಂಬೈ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಕಾರ್ಯಕ್ರಮದಲ್ಲಿದ್ದ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಅಲಿಯಾಸ್ ಬಿಯರ್ ಬೈಸೆಪ್ಸ್, ಯೂಟ್ಯೂಬರ್ ಆಶಿಶ್ ಚಂಚಲಾನಿ ಹಾಗೂ ಕಾರ್ಯಕ್ರಮದ ಸಂಘಟಕರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ನಿಖಿಲ್ ರೂಪಾರೆಲ್ ಅವರು ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ್ ಮೂಲಕ ದೂರು ದಾಖಲಿಸಿದ್ದಾರೆ.ಇದನ್ನೂ ಓದಿ: ಪೋಷಕರ ಲೈಂಗಿಕ ಕ್ರಿಯೆ ವೀಕ್ಷಿಸುತ್ತೀರಾ? – ಯೂಟ್ಯೂಬರ್ ರಣವೀರ್ ಅಲ್ಲಾಬಾದಿಯಾ ಕೀಳು ಹೇಳಿಕೆ, ನೆಟ್ಟಿಗರಿಂದ ಭಾರೀ ಆಕ್ರೋಶ
ಜೊತೆಗೆ ಇನ್ನೋರ್ವ ವಕೀಲ ಸತ್ಯಂ ಸುರಾನ ಸೇರಿದಂತೆ ಅನೇಕರು ಕೂಡ ಕಾರ್ಯಕ್ರಮದ ವಿರುದ್ಧ ದೂರು ಸಲ್ಲಿಸಿದ್ದಾರೆ. ವರದಿ ಪ್ರಕಾರ, ಮುಂಬೈ ಪೊಲೀಸರು ಈಗಾಗಲೇ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆಯಾದ ನ್ಯಾಷನಲ್ ಡೆಲಿಗೇಟ್ ಎನ್ಎಸ್ಯುಐನ ಅಧ್ಯಕ್ಷರಾದ ರೂಪಾರೆಲ್, ಯೂಟ್ಯೂಬ್ನಲ್ಲಿ ಪ್ರಸಾರವಾದ ಸಂಚಿಕೆಯಲ್ಲಿ ಅಲಹಾಬಾದಿಯಾ ಅವರು ಆಡಿದ ಮಾತು ತೀವ್ರ ಆಕ್ರಮಣಕಾರಿ ಹಾಗೂ ಅಶ್ಲೀಲತೆಯಿಂದ ಕೂಡಿತ್ತು. ಅಶ್ಲೀಲತೆ ಸಾರ್ವಜನಿಕ ವೇದಿಕೆಯಲ್ಲಿ ಬಳಕೆಯಾದರೆ ಅದರಿಂದ ಅಗೌರವದ ನಡವಳಿಕೆಗಳು ಸಾಮಾನ್ಯೀಕರಣಗೊಂಡು, ಎಳೆಯ ಪ್ರಾಯದ ವೀಕ್ಷಕರ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಹೇಳಿಕೆಗಳು ಸಾಮಾಜಿಕ ಮೌಲ್ಯಗಳನ್ನು ತೀವ್ರವಾಗಿ ಕೆಡಿಸುವ, ನೈತಿಕ ಮಾನದಂಡಗಳನ್ನು ದುರ್ಬಲಗೊಳಿಸುವ ಮತ್ತು ಸಾರ್ವಜನಿಕ ನೈತಿಕತೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುತ್ತವೆ. ಹೀಗಾಗಿ ಅಂತಹ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಬಾರದು ಎಂದು ಹೇಳಿದ್ದಾರೆ.
ಈ ಪ್ರಕರಣವನ್ನು ಪರಿಗಣಿಸಿ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡುವಂತೆ ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಕೊಡಗು | ಕಚೇರಿಯಲ್ಲೇ ಕುಸಿದು ಬಿದ್ದು ಆಹಾರ ಸರಬರಾಜು ಇಲಾಖೆ ಅಧಿಕಾರಿ ಸಾವು