ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರಿಗೆ ಕಟು ನುಡಿಗಳಲ್ಲಿ ಟೀಕಿಸಿರುವ ನಟ ದರ್ಶನ್ (Darshan) ವಿರುದ್ಧ ಕರ್ನಾಟಕ ಪ್ರಜಾಪರ ವೇದಿಕೆಯು ಫಿಲ್ಮ್ ಛೇಂಬರ್ ಗೆ ದೂರು ನೀಡಿದೆ. ಸಾರ್ವಜನಿಕ ವೇದಿಕೆಯ ಮೇಲೆ ಉಮಾಪತಿಗೆ ತಗಡು, ಗುಮ್ಮಿಸ್ಕೋತೀಯಾ ರೀತಿಯ ಪದಗಳನ್ನು ಆಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಾಟೇರ ಸಿನಿಮಾದ ಕಥೆ ಬರೆಯಿಸಿದ್ದು ನಾನು, ಅದು ನನ್ನದೇ ಟೈಟಲ್ ಎಂದು ಉಮಾಪತಿ ಗೌಡ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದಕ್ಕೆ ಉತ್ತರ ಎನ್ನುವಂತೆ ಕಾಟೇರ ಸಿನಿಮಾದ ಐವತ್ತನೇ ದಿನದ ಸಂಭ್ರಮದಲ್ಲಿ ದರ್ಶನ್ ತಿರುಗೇಟು ನೀಡಿದ್ದರು. ಅಲ್ಲದೇ, ತಗಡು ಮತ್ತು ‘ಪ್ರತಿ ಬಾರಿ ಯಾಕೆ ನಮ್ಮಿಂದ ಗುಮ್ಮಿಸ್ಕೋಳ್ತಿಯಾ’ ಎನ್ನುವ ಮಾತುಗಳನ್ನು ಆಡಿದ್ದರು.
ಈ ಕುರಿತಂತೆ ಸಂಘಟನೆಯು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು, ಈ ವಿಷಯದಲ್ಲಿ ದರ್ಶನ್ ಅವರು ಕ್ಷಮೆ ಕೇಳಬೇಕು. ಕ್ಷಮೆ ಕೇಳದೇ ಇದ್ದರೆ, ದರ್ಶನ್ ಮನೆಯ ಮುಂದೆ ನೂರಾರು ಕನ್ನಡ ಕಾರ್ಯಕರ್ತರು ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಉಮಾಪತಿ ಮತ್ತು ದರ್ಶನ್ ವಿಚಾರ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿರ್ದೇಶಕರಾದ ತರುಣ್ ಸುಧೀರ್ ಮತ್ತು ಮಹೇಶ್ ಕುಮಾರ್ ಇಬ್ಬರೂ ದರ್ಶನ್ ಪರ ಬ್ಯಾಟ್ ಮಾಡುತ್ತಿದ್ದಾರೆ. ಇದಕ್ಕೆ ಕೌಂಟರ್ ಎನ್ನುವಂತೆ ಉಮಾಪತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.