ನವದೆಹಲಿ: ರಾಮ ನವಮಿಯಂದು ಭುಗಿಲೆದ್ದ ಹಿಂಸಾಚಾರದ ಬಳಿಕ ಹನುಮಜಯಂತಿಯ ಸಂದರ್ಭದಲ್ಲಿಯೂ ಮತ್ತೊಮ್ಮೆ ದೇಶದ ಅನೇಕ ರಾಜ್ಯಗಳಲ್ಲಿ ಘರ್ಷಣೆಗಳು ವರದಿಯಾದವು.
ಹನುಮಜಯಂತಿಯ ಪ್ರಯುಕ್ತ ದೇಶದ ಹಲವೆಡೆ ಶೋಭಾಯಾತ್ರೆಗಳನ್ನು ಮಾಡಲಾಗಿದ್ದು, ಈ ವೇಳೆ ಕಲ್ಲುತೂರಾಟದಂತಹ ಘಟನೆಗಳು ನಡೆದಿದೆ. ಇದರಲ್ಲಿ ಕರ್ನಾಟಕದ ಹುಬ್ಬಳಿಯಲ್ಲಿ ನಡೆದ ಘಟನೆಯೂ ಒಂದು. ದೆಹಲಿಯ ಜಹಾಂಗೀರ್ಪುರಿ ಪ್ರಾರಂಭವಾದ ಘರ್ಷಣೆ ಬಳಿಕ ಉತ್ತರಾಖಂಡ, ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲೂ ನಡೆಯಿತು. ಇದನ್ನೂ ಓದಿ: ದೆಹಲಿ ಹನುಮ ಜಯಂತಿ ಮೆರವಣಿಗೆಯಲ್ಲಿ ಹಿಂಸಾಚಾರ ಪ್ರಕರಣ – ಇಬ್ಬರು ಅಪ್ರಾಪ್ತರು ಸೇರಿ 21 ಜನರ ಬಂಧನ
ಪರಿಸ್ಥಿತಿಯನ್ನು ನಿಯಂತ್ರಿಸಲು ಈ ಎಲ್ಲಾ ರಾಜ್ಯಗಳಲ್ಲೂ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಯಿತು. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಸುಮಾರು 140 ಜನರನ್ನು ಬಂಧಿಸಲಾಗಿದೆ. ಕರ್ನಾಟಕದಲ್ಲೇ ಸುಮಾರು 90 ಜನರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ ಹಿಂಸಾಚಾರ ಪೂರ್ವನಿಯೋಜಿತ ಸಂಚು: ಬಿರುಗಾಳಿ ಎಬ್ಬಿಸಿದ ವಾಟ್ಸಪ್ ಆಡಿಯೋ
ಈ ತಿಂಗಳು ದೇಶದಲ್ಲಿ ಹಿಂಸಾಚಾರಗಳು ನಡೆದು ಜನತೆಯನ್ನು ಬೆಚ್ಚಿ ಬೀಳಿಸಿರುವುದು ಮೊದಲೇನಲ್ಲ. ಇದೇ ತಿಂಗಳು ನಡೆದ ರಾಮನವಮಿ ಆಚರಣೆಯಂದು ಕೂಡಾ ಗುಜರಾತ್, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಹೀಗೆ ಹಲವಾರು ರಾಜ್ಯಗಳಲ್ಲಿ ಕಲ್ಲು ತೂರಾಟ ಹಾಗೂ ಬೆಂಕಿ ಹಚ್ಚಿದ ಘಟನೆಗಳನ್ನು ವರದಿಯಾಗಿದೆ.
ದೇಶದ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಹಿಂಸಾಚಾರಗಳನ್ನು ಪೂರ್ವನಿಯೋಜಿತ ಪಿತೂರಿ ಎಂದು ಬಿಜೆಪಿ ಹೇಳಿದೆ. ಈ ಘಟನೆಗಳ ಬಗ್ಗೆ ರಾಜ್ಯ ಸರ್ಕಾರಗಳು ಗಂಭೀರವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.