ದಾವಣಗೆರೆ: ದೇಶದಲ್ಲೇ ಮೊದಲ ಬಾರಿಗೆ ಎಂಬಂತೆ ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆ ಜಿಲ್ಲಾ ಪೊಲೀಸ್ಗೆ ಕಮಾಂಡರ್ ಗಳನ್ನು ಪರಿಚಯಿಸಲಾಗಿದ್ದು, ವಿಶೇಷ ತಂತ್ರಜ್ಞಾನ ಹೊಂದಿದ ವಾಹನಗಳನ್ನು ಖರೀದಿಸಲಾಗಿದೆ.
ನಗರದಲ್ಲಿ ಆಗಾಗ ಸಣ್ಣ ಪುಟ್ಟ ಕ್ರೈಂಗಳು ಸಂಭವಿಸುತ್ತಲೇ ಇರುತ್ತವೆ. ಜನಸಂಖ್ಯೆ ದೊಡ್ಡದಾಗುತ್ತಿದ್ದಂತೆ ಕ್ರೈಂ ಪ್ರಕರಣಗಳು ಸಹ ಬೆಳೆಯುತ್ತಿವೆ. ಹೀಗಾಗಿ ಅಪರಾಧ ಪ್ರಕರಣಗಳ ಪತ್ತೆಗೆ ಪೊಲೀಸರು ಈಗ ಹೈಟೆಕ್ ತಂತ್ರಜ್ಞಾನ ಬಳಕೆ ಮೊರೆ ಹೋಗಿದ್ದಾರೆ. ಇದರ ಭಾಗವಾಗಿ ಮೂರು ಕಮಾಂಡೊ ವೆಹಿಕಲ್ಗಳು ಜಿಲ್ಲಾ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿವೆ.
ಇಡೀ ದೇಶದಲ್ಲೇ ಮೊದಲ ಬಾರಿಗೆ ಎಂಬಂತೆ ಕಮಾಂಡೋ ವಾಹನಗಳನ್ನು ದಾವಣಗೆರೆ ಪೊಲೀಸರಿಗೆ ಸ್ಮಾರ್ಟ್ ಸಿಟಿ ಯೋಜನೆ ಯಡಿ ನೀಡಲಾಗಿದೆ. ಸ್ಮಾರ್ಟ್ಸಿಟಿಗೆ ಆಯ್ಕೆಯಾಗಿರುವ ಯಾವ ಜಿಲ್ಲೆಯಲ್ಲಿಯೂ ಈ ಕಮಾಂಡೋ ವಾಹನ ನೀಡಿಲ್ಲ. ಆದರೆ ಸ್ಮಾರ್ಟ್ ಸಿಟಿ ಯೋಜನೆ ಎಂಡಿ ರವೀಂದ್ರ ಮಲ್ಲಾಪುರ ಅವರು ಸಿಸಿ ಪೂರ್ವವಲಯದ ಐಜಿಪಿ ಎಸ್.ರವಿ ಅವರಿಗೆ ಹಸ್ತಾಂತರಿಸಿದ್ದಾರೆ. ಅಲ್ಲದೇ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾರ್ಪಾಡು ಆಗಬೇಕಿದ್ದು, ಅವುಗಳ ಪೂರೈಕೆಗೆ ಐಜಿಪಿ ಸ್ಮಾರ್ಟ್ಸಿಟಿ ಎಂಡಿಗೆ ಮನವಿ ಮಾಡಿದ್ದಾರೆ.
ಹೊಸ ತಂತ್ರಜ್ಞಾನವನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ. ಅಲ್ಲದೆ ದೊಡ್ಡ ಸಭೆ, ಸಮಾರಂಭ, ಪ್ರತಿಭಟನೆ ಸೇರಿದಂತೆ ಹೆಚ್ಚು ಜನ ಸೇರುವ ಸಮಾರಂಭಗಳ ಮೇಲೆ ಹದ್ದಿನ ಕಣ್ಣಿಡಲು ಈ ವಾಹನ ಸಹಕಾರಿಯಾಗಲಿದೆ.
ವಿಶೇಷತೆ ಏನು?
ಈ ಕಮಾಂಡೋ ವಾಹನದಲ್ಲಿ ಐದು ಮಂದಿ ಕೂರಬಹುದು. 2500 ಸಿಸಿ ಸಾಮರ್ಥ್ಯದ ಎಂಜಿನ್ವುಳ್ಳ ಈ ವೆಹಿಕಲ್ ಗುಡ್ಡಗಾಡು ಪ್ರದೇಶದಲ್ಲಿ ಕೂಡ ಸಾಗುತ್ತದೆ. ಇದರಲ್ಲಿ ಡ್ರೋನ್ ಕ್ಯಾಮೆರಾ ವ್ಯವಸ್ಥೆ ಸಹ ಇದ್ದು, ಕ್ಯೂಆರ್ ಕೋಡ್ ಸಹ ಅಳವಡಿಸಲಾಗಿದೆ. ಈ ಕ್ಯೂಆರ್ ಕೋಡ್ನಿಂದಾಗಿ ಡ್ರೋನ್ ಎಲ್ಲೇ ಹೋದರೂ ವೆಹಿಕಲ್ ಇರುವ ಜಾಗಕ್ಕೆ ಮತ್ತೆ ಬರುತ್ತದೆ. ಅಲ್ಲದೆ ಗನ್ ಟೈ ಪ್ಯಾಡ್, ಡಬಲ್ ಬ್ಯಾಟರಿ ಬಾಕ್ಸ್, ಸಿಗ್ನಲ್ ಜಾಮರ್, ಗನ್ ಇಡಲು ಆಮೋ ಬಾಕ್ಸ್, ಸರ್ವಲೆನ್ಸ್ ಕ್ಯಾಮೆರಾ, ಫೈರ್ ಪೂಫ್, ಬೆಂಕಿ ನಿಯಂತ್ರಣ ಸಾಧನ, ಗಲಭೆಯಲ್ಲಿ ವಾಹನಕ್ಕೆ ಕಲ್ಲು ಬೀಳದಂತೆ ತಡೆಯಲು ಮೆಸ್, ಫೋಕಸ್ ಲೈಟ್ ಸೇರಿದಂತೆ ಇನ್ನಿತರ ವಿಶೇಷತೆಗಳನ್ನು ಅಳವಡಿಸಲಾಗಿದೆ. ಇನ್ನೂ ವಿಶೇಷವೆಂದರೆ ಆಟೋಮೋಟಿವ್ ವೆಹಿಕಲ್ ಲೊಕೇಷನ್ ಸಿಸ್ಟಂ ಸಹ ಇದೆ. ಇದರಿಂದ ಪೊಲೀಸರು ಪ್ರತಿ ಬಾರಿ ಕಂಟ್ರೋಲ್ ರೂಮ್ ಸಂಪರ್ಕಿಸಬೇಕಿಲ್ಲ. ಘಟನಾ ಸ್ಥಳಕ್ಕೆ ಬೇಗ ತಲುಪಬಲ್ಲದು. ಅಲ್ಲದೆ ಘಟನಾ ಸ್ಥಳದ ಚಿತ್ರಣವನ್ನು ಎಸ್ಪಿ ಕಚೇರಿಯಲ್ಲಿ ಕುಳಿತುಕೊಂಡೇ ವೀಕ್ಷಿಸಬಹುದಾಗಿದೆ.
ದೇಶದಲ್ಲಿಯೇ ಈ ವ್ಯವಸ್ಥೆ ಅಳವಡಿಸಿಕೊಳ್ಳಲಿರುವ ಪ್ರಥಮ ನಗರ ದಾವಣಗೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈಗಾಗಲೇ ಖಾಲಿ ಕಮಾಂಡೊ ವಾಹನಗಳು ಬಂದಿವೆ. ವಾಹನಕ್ಕೆ ಬೇಕಾದ ಸಾಮಗ್ರಿ ಅಳವಡಿಸಲು ಸ್ಟಾರ್ಟ್ಸಿಟಿ ತಂಡ ಮುಂದಾಗಿದೆ. ಇದಕ್ಕೆ ಆರ್ ಟಿಓ ಅನುಮತಿ ಬೇಕಿದ್ದು, ಇದಾದ ಬಳಿಕ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.