ಚೆನ್ನೈ: ಕೊಯಮತ್ತೂರು ಪೊಲೀಸ್ ಉಪ ಮಹಾನಿರೀಕ್ಷಕ (Coimbatore DIG) ವಿಜಯಕುಮಾರ್ (IPS) ತಮ್ಮ ಅಧಿಕೃತ ನಿವಾಸದಲ್ಲಿ ಶುಕ್ರವಾರ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶುಕ್ರವಾರ ಬೆಳಗ್ಗೆ ಸುಮಾರು 6:15ರ ವೇಳೆಗೆ ವಿಜಯಕುಮಾರ್ ರೇಸ್ ಕೋರ್ಸ್ ಬಳಿಯ ರೆಡ್ ಫೀಲ್ಡ್ಸ್ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಕರ್ತವ್ಯದಲ್ಲಿದ್ದ ಗನ್ಮ್ಯಾನ್ನಿಂದ ಪಿಸ್ತೂಲ್ ಅನ್ನು ಪಡೆದು ತನಗೆ ತಾನೇ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯಕುಮಾರ್ (Vijayakumar) ತೀವ್ರ ಖಿನ್ನತೆಗೆ ಒಳಗಾಗಿದ್ದರು ಹಾಗೂ ನಿದ್ರಾಹೀನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವರಿಗೆ ಕೌನ್ಸೆಲಿಂಗ್ ಕೂಡಾ ನಡೆಯುತ್ತಿತ್ತು ಹಾಗೂ ಕೆಲ ದಿನಗಳ ಹಿಂದಷ್ಟೇ ಅವರ ಕುಟುಂಬವನ್ನು ಚೆನ್ನೈಯಿಂದ ಕೊಯಮತ್ತೂರಿಗೆ ಕರೆತರಲಾಗಿತ್ತು. ಇದನ್ನೂ ಓದಿ: ನಿತ್ಯಾನಂದನ ಕೈಲಾಸ ದೇಶಕ್ಕೆ ನಟಿ ರಂಜಿತಾ ಪ್ರಧಾನಿ
2009ರ ಬ್ಯಾಚ್ನ ಐಪಿಎಸ್ ಅಧಿಕಾರಿ ವಿಜಯಕುಮಾರ್ ಅವರು ಈ ವರ್ಷದ ಜನವರಿಯಲ್ಲಿ ಕೊಯಮತ್ತೂರು ವ್ಯಾಪ್ತಿಯ ಡಿಐಜಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದಕ್ಕೂ ಮೊದಲು ಅವರು ಕಾಂಚೀಪುರಂ, ಕಡಲೂರು, ನಾಗಪಟ್ಟಿಣಂ ಮತ್ತು ತಿರುವರೂರಿನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹಾಗೂ ಅಣ್ಣಾನಗರದ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.
ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಟ್ವೀಟ್ ಮಾಡಿ, ಅಧಿಕಾರಿ ವಿಜಯಕುಮಾರ್ ಅವರ ಅಕಾಲಿಕ ಮರಣದ ಸುದ್ದಿ ಕೇಳಿ ಆಘಾತ ಮತ್ತು ದುಃಖವಾಗಿದೆ. ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ವಿವಿಧ ಪಾತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ನಿಧನ ತಮಿಳುನಾಡು ಪೊಲೀಸ್ ಇಲಾಖೆಗೆ ದೊಡ್ಡ ನಷ್ಟವಾಗಿದೆ. ಅವರ ಕುಟುಂಬ ಮತ್ತು ಪೊಲೀಸ್ ಪಡೆಯಲ್ಲಿರುವ ಸ್ನೇಹಿತರಿಗೆ ನನ್ನ ತೀವ್ರ ಸಂತಾಪ ಸೂಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಶಿಸ್ತು ಕಾಪಾಡಲು ವಿದ್ಯಾರ್ಥಿಗಳ ಕೂದಲು ಕತ್ತರಿಸಿದ ಶಿಕ್ಷಕಿ – ಶಾಲೆಯಿಂದ ವಜಾ
Web Stories