ಚೆನ್ನೈ: ಅಕ್ಟೋಬರ್ 23 ರಂದು ತಮಿಳುನಾಡಿನ (Tamil Nadu) ಕೊಯಮತ್ತೂರಿನಲ್ಲಿ (Coimbatore) ನಡೆದ ಕಾರಿನ ಸಿಲಿಂಡರ್ ಸ್ಫೋಟ ಪ್ರಕರಣ (Cylinder Blast Case) ಬಳಿಕ ಭಯೋತ್ಪಾದನಾ (Terrorism) ತಿರುವು ಪಡೆದುಕೊಂಡಿತ್ತು. ಘಟನೆಯಲ್ಲಿ ಮೃತಪಟ್ಟಿದ್ದ ವ್ಯಕ್ತಿ ಜಮೇಜಾ ಮುಬಿನ್ ಮನೆಯಲ್ಲಿಯೂ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿತ್ತು. ಇದೀಗ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೈಗೆತ್ತಿಕೊಂಡಿದೆ.
ಭಾನುವಾರ ಮುಂಜಾನೆ ಸುಮಾರು 4:30ರ ವೇಳೆಗೆ ಕೊಟ್ಟೈ ಈಶ್ವರನ್ ದೇವಸ್ಥಾನದ ಬಳಿ ಮಾರುತಿ 800 ಕಾರಿನಲ್ಲಿ ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಜಮೇಜಾ ಮುಬಿನ್ (27) ಸಾವನ್ನಪ್ಪಿದ್ದ.
ಬಳಿಕ ತನಿಖೆಯನ್ನು ಆರಂಭಿಸಿದ ಪೊಲೀಸರು ಸುಟ್ಟು ಹೋದ ಕಾರಿನಲ್ಲಿ ಹಾಗೂ ಜಮೇಜಾ ಮುಬಿನ್ನ ಮನೆಯಲ್ಲಿ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚಿದ್ದರು. ಇದಕ್ಕೂ ಮುನ್ನ ಆತ 1019ರಲ್ಲಿ ಶ್ರೀಲಂಕಾದ ಈಸ್ಟರ್ ಸಂಡೇ ಸ್ಫೋಟದ ಮಾಸ್ಟರ್ ಮೈಂಡ್ ಜಹ್ರಾನ್ ಹಾಶಿಮ್ಗೆ ಸಂಬಂಧಿಸಿದ ಜಾಲದೊಂದಿಗೆ ಸಂಬಂಧ ಹೊಂದಿದ್ದ ಆರೋಪದಡಿ ಆತನನ್ನು ಅಧಿಕಾರಿಗಳು ವಿಚಾರಣೆಯನ್ನೂ ಮಾಡಿದ್ದರು. ಆದರೆ ಆತನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಇದನ್ನೂ ಓದಿ: ಯೋಗಿ, ಮೋದಿ ವಿರುದ್ಧ ದ್ವೇಷದ ಭಾಷಣ – ಅಜಂ ಖಾನ್ಗೆ 3 ವರ್ಷ ಜೈಲು
ಇದಾದ ಬಳಿಕ ಜಮೇಜಾ ಮುಬಿನ್ನ ಮನೆಯಿಂದ ಕೆಲವರು ಭಾರವಾದ ವಸ್ತುಗಳನ್ನು ಹೊರಗಡೆ ತೆಗೆದುಕೊಂಡು ಹೋಗಿದ್ದ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದರು. ಈ ಎಲ್ಲಾ ಭಯೋತ್ಪಾದನಾ ಸುಳಿವುಗಳ ಬೆನ್ನಲ್ಲೇ ಇದು ಆತ್ಮಹತ್ಯಾ ದಾಳಿ ಎಂದು ಕೇಳಿ ಬಂದಿದ್ದು, ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಬೇಕು ಎಂಬ ಒತ್ತಡ ಕೇಳಿಬಂದಿತ್ತು. ತಮಿಳುನಾಡು ಸರ್ಕಾರ ಈ ಪ್ರಕರಣವನ್ನು ಬುಧವಾರ ಎನ್ಐಎಗೆ ವಹಿಸಿತ್ತು.
ಇದೀಗ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದ ತನಿಖೆಯನ್ನು ಎನ್ಐಎ ವಹಿಸಿಕೊಂಡಿದ್ದು, ಭಯೋತ್ಪಾದನಾ ಸಂಚಿನ ಕೋನದಲ್ಲಿ ತನಿಖೆ ನಡೆಸಲಿದೆ. ಇದನ್ನೂ ಓದಿ: ಕರ್ನಾಟಕ ವಿವಿಯಲ್ಲಿದ್ದ ಉಗಾಂಡ ದೇಶದ ವಿದ್ಯಾರ್ಥಿ ನಾಪತ್ತೆ