ರಾಮನಗರ: ಅಧಿಕಾರ ಎಷ್ಟು ದಿನ ಇರುತ್ತೆ ಮುಖ್ಯವಲ್ಲ. ಅಧಿಕಾರದಲ್ಲಿ ಇದ್ದಾಗ ನಾವೇನು ಮಾಡಿದ್ದೇವೆ ಅನ್ನೋದು ಮುಖ್ಯ. ನಮ್ಮ ಕೈಯಲ್ಲಿ ಅಧಿಕಾರವಿದೆ, ಆದರಿಂದ ನಾವು ಜನಪರವಾಗಿ ಕೆಲಸ ಮಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಭರವಸೆ ನುಡಿಗಳನ್ನಾಡಿದ್ದಾರೆ.
ರಾಮನಗರದಲ್ಲಿ ನಡೆದ ಸಿಎಂ ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದಿಂದ ಕುಮಾರಸ್ವಾಮಿ ಅವರನ್ನ ಗೆಲ್ಲಿಸಿದ್ದೀರಿ, ಮತ ಹಾಕಿ ನನ್ನನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಸಮ್ಮಿಶ್ರ ಸರ್ಕಾರ ಎಷ್ಟು ದಿನ ಇರತ್ತೆ ಅನ್ನೋದು ಮುಖ್ಯವಲ್ಲ. ಅಧಿಕಾರದಲ್ಲಿದಾಗ ಏನು ಕೆಲಸ ಮಾಡಿದ್ದಾರೆ ಎನ್ನೋದು ಮುಖ್ಯ. ಸೌಟು ನಮ್ಮ ಕೈಯಲ್ಲಿ ಇದ್ರೆ ಎರಡು ತುಂಡು ಜಾಸ್ತಿ ಹಾಕಬಹುದು ಅಂತ ಹಳ್ಳಿ ಕಡೆ ಗಾದೆಯಿದೆ. ಅದೇ ರೀತಿ ನಮ್ಮ ಕೈಯಲ್ಲಿ ಅಧಿಕಾರವಿದೆ ನಾವು ನಿಮಗಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಮೈತ್ರಿ ಸರ್ಕಾರ ಉಳಿಸೋ ಶಕ್ತಿ ಡಿ.ಕೆ.ಶಿವಕುಮಾರ್: ಎಚ್ಡಿಕೆ
ಅಧಿಕಾರ ಇರುವುದರಿಂದ ಏನೇನು ಮಾಡಬೇಕು ಅಂತ ಯಾರು ಪ್ರಶ್ನೆ ಮಾಡೋರು ಇಲ್ಲ. ಬಜೆಟ್ನಲ್ಲಿ ನಮ್ಮ ಹೆಸರು ಘೋಷಿಸಿಕೊಂಡು ಡಂಗೂರ ಹಾಕಬೇಕಾಗಿಲ್ಲ. ನಿಮ್ಮ ಸೇವೆ ಮಾಡಬೇಕು ಅಷ್ಟೇ ನಮ್ಮ ಕೆಲಸ ಎಂದಿದ್ದಾರೆ. ಯಡಿಯೂರಪ್ಪನವರಿಗೆ ಸರ್ಕಾರ ಒಂದು ವರ್ಷ ಏನು ಮಾಡುತ್ತದೆ ಎಂದು ನೋಡಲು ತಾಳ್ಮೆ ಇಲ್ಲ. ಅವರ ಜೊತೆ ಚನ್ನಪಟ್ಟಣದ ಮಾಜಿ ಶಾಸಕ ಸಹ ಸೇರಿಕೊಂಡಿದ್ದಾರೆ. ಹಸಿರು ಟವಲ್ ಹಾಕಿಕೊಂಡ ತಕ್ಷಣ ರೈತರ ಮಗ ಅಗಲು ಸಾಧ್ಯವಿಲ್ಲ. ಬೇರೆ ಅವರನ್ನ ಬದುಕಿಸುವ ಮೊದಲು ನೀವು ಬದಕಲು ಕಲಿಯಿರಿ. ಬಿಎಸ್ವೈ ಅವರು ಬೆಂಗಳೂರಿನಲ್ಲಿ ಕುಳಿತು ಮೈತ್ರಿ ಸರ್ಕಾರವನ್ನು ಕೆಳಗಿಸಲು ತಂತ್ರ ಮಾಡುತ್ತಿದ್ದಾರೆ ಹೊರೆತೂ ತಮ್ಮನ್ನು ಗೆಲ್ಲಿಸಿದ ಜನರಿಗಾಗಿ ಕೆಲಸ ಮಾಡಿಲ್ಲ ಎಂದು ಡಿಕೆಶಿ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಕಾರ್ಯಕರ್ತರೇ ಮೋಸ ಹೋಗಿದ್ದೀರಿ. ಬಿಜೆಪಿ ಕಾರ್ಯಕರ್ತರು ಜೆಡಿಎಸ್ಗೆ ಸೇರೋರು ಜೆಡಿಎಸ್ ಸೇರಿ, ಕಾಂಗ್ರೆಸ್ ಸೇರೋರು ಕಾಂಗ್ರೆಸ್ಸಿಗೆ ಸೇರಿ. ನಾವು ಸದಾ ನಿಮ್ಮನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv