ಮುಂಬೈ: ಟೀಂ ಇಂಡಿಯಾ ಜೂನಿಯರ್ ಕೋಚ್ ರಾಹುಲ್ ದ್ರಾವಿಡ್ ಅವರನ್ನು ರಾಷ್ಟ್ರಿಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯ ತರಬೇತುದಾರರನ್ನಾಗಿ ನೇಮಕ ಮಾಡಲು ಬಿಸಿಸಿಐ ಪ್ರಕ್ರಿಯೆ ಆರಂಭಿಸಿದೆ ಎಂಬ ಮಾಹಿತಿ ಲಭಿಸಿದೆ.
ಬಿಸಿಸಿಐ ಹೊಸದಾಗಿ ಸೃಷ್ಟಿ ಮಾಡಿರುವ ಹೆಡ್ಕೋಚ್ ಹುದ್ದೆ ಜವಾಬ್ದಾರಿಯನ್ನು ನಿರ್ವಹಿಸಲು ಕೋಚ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಈಗಾಗಲೇ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಅಂಡರ್ 19, ಟೀಂ ಇಂಡಿಯಾ ‘ಎ’ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಅವರನ್ನು ಎನ್ಸಿಎ ಮುಖ್ಯ ಕೋಚ್ ಆಗಿ ನೇಮಕ ಮಾಡಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಸದ್ಯ ಎನ್ಸಿಎ ಜವಾಬ್ದಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತುಫಾನ್ ಘೋಷ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಮುಖ್ಯ ಕೋಚ್ ನೇಮಕವಾದ ಬಳಿಕ ಅಕಾಡೆಮಿಯ ಇತರೆ ಕೋಚ್ಗಳ ನೇಮಕದಿಂದ ಹಿಡಿದು, ಎಲ್ಲಾ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಮುಖ್ಯ ಕೋಚ್ ಅವರು ನಿರ್ವಹಿಸಲಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಬಿಸಿಸಿಐ ವಕ್ತಾರರೊಬ್ಬರು ಪ್ರತಿಕ್ರಿಯಿಸಿ, ಬಿಸಿಸಿಐ ನಿಯಮಗಳ ಅನ್ವಯವೇ ಕೋಚ್ ಪದವಿಗೆ ಅರ್ಜಿ ಆಹ್ವಾನ ಮಾಡಿ ನೇಮಕ ಮಾಡಲಾಗುತ್ತದೆ. ಈ ರೇಸ್ ನಲ್ಲಿ ದ್ರಾವಿಡ್ ಅವರು ಮುಂದಿದ್ದಾರೆ. ಆದರೆ ಇಂದಿಗೂ ಅವರು ಟೀಂ ಇಂಡಿಯಾ ಜೂನಿಯರ್ ತಂಡ ಕೋಚ್ ಆಗಿ ಮುಂದುವರಿದಿದ್ದಾರೆ ಎಂದು ತಿಳಿಸಿದರು.
ಬಿಸಿಸಿಐ ನೀಡಿರುವ ಮಾಹಿತಿಯಂತೆ ದ್ರಾವಿಡ್ ಅವರಿಗೆ ಕೋಚ್ ಹೆಚ್ಚಿನ ಜವಾಬ್ದಾರಿಯುತ ಹುದ್ದೆ ಬಹುತೇಕ ಖಚಿತ ಎನ್ನಲಾಗಿದ್ದು, ನಿಯಮಗಳನ್ನು ಪೂರೈಸಲು ಪ್ರಕ್ರಿಯೆ ಆರಂಭಿಸಲಾಗಿದೆ. ಈ ಹಿಂದೆ ಇಂತಹ ಹುದ್ದೆಗಳಿಗೆ ನೇರ ನೇಮಕಾತಿ ನಡೆದ ವೇಳೆ ಕೇಳಿ ಬಂದ ವಿಮರ್ಶೆಗಳ ಹಿನ್ನೆಲೆಯಲ್ಲಿ ಬಿಸಿಸಿಐ ಈ ಬಾರಿ ಇಂತಹ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.